ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನೆ ಭಯದಿಂದ ಐದು ಜಿಲ್ಲೆಗಳ ಜನ ತತ್ತರಿಸಿದ್ದಾರೆ. ಯಾವಾಗ, ಯಾವ ಸಮಯದಲ್ಲಿ ದಾಳಿ ಮಾಡುತ್ತದೆಯೋ ಎಂದು ಸ್ಥಳೀಯ ಜನರು ಜೀವಭಯದಲ್ಲಿದ್ದಾರೆ. ಬೆಳಗ್ಗೆ/ಸಂಜೆ ಜನರು ಮನೆಯೊಳಗೆ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜಾರ್ಖಂಡ್ ರಾಜ್ಯದ ಹಜಾರಿಬಾಗ್, ರಾಮಗಢ, ಚತಾರಾ, ಲೋಹರ್ದಗಾ ಮತ್ತು ರಾಂಚಿ ಜಿಲ್ಲೆಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಆನೆ ದಾಳಿಗೆ 12 ದಿನಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಆನೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಜಾರ್ಖಂಡ್ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಶಿಕುಮಾರ್ ಸಾಮಂತಾ ತಿಳಿಸಿದ್ದಾರೆ. ಆನೆಯನ್ನು ಕಾಡಿಗೆ ಸ್ಥಳಾಂತರಿಸಲು ಪಶ್ಚಿಮ ಬಂಗಾಳ ರಾಜ್ಯದ ತಜ್ಞರ ತಂಡ ಕೂಡ ಹರಸಾಹಸ ಪಡುತ್ತಿವೆ. ಆನೆಗಳ ಹಾವಳಿಯಿಂದ ಹೆಚ್ಚಿನ ಪ್ರಾಣಹಾನಿಯಾಗದಂತೆ ತಡೆಯಲು ಅಧಿಕಾರಿಗಳು ಆಯಾ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೆ ತಂದಿದ್ದಾರೆ.
ರಾಂಚಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ ಆನೆಯೊಂದು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಲಿತೆಗೆದುಕೊಂಡ ಪರಿಣಾಮ ಜನರು ಭಯಭೀತರಾಗಿದ್ದಾರೆ. ಲೋಹರ್ಡಗಾ ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಮಹಿಳೆಯರು, ಭಾನುವಾರ ಮುಂಜಾನೆ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 12 ದಿನಗಳ ಹಿಂದೆ ಇದೇ ಆನೆ ಹಜಾರಿಬಾಗ್ನಲ್ಲಿ ಐದು ಜನರನ್ನು ಕೊಂದು ನಂತರ ರಾಮಗಢಕ್ಕೆ ತೆರಳಿ ಅಲ್ಲಿ ಗೋಲಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ತುಳಿದು ಕೊಂದಿತ್ತು ಎಂದು ರಾಂಚಿ ಡಿಎಫ್ಒ ಹೇಳಿದರು. ಈ ಆನೆಯು 12 ದಿನಗಳಿಂದ ಏಕಕಾಲದಲ್ಲಿ 16 ಜನರ ಮೇಲೆ ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿದೆ.