ಹೊಸದಿಗಂತ ಡಿಜಿಟಲ್ ಡೆಸ್ಕ್
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಎನ್ ಕೌಂಟರ್ ನಡೆಸಿ ನಾಲ್ವರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಉಗ್ರರನ್ನು ಹತ್ಯೆಗೈದಿದ್ದಾರೆ.
ಏತನ್ಮಧ್ಯೆ, ಗುಂಡಿನ ಚಕಮಕಿ ಸ್ಥಳಕ್ಕೆ ತೆರಳುತ್ತಿದ್ದಾಗ ಸೇನಾ ವಾಹನ ಅಪಘಾತಕ್ಕೀಡಾಗಿ ಮೂವರು ಯೋಧರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.
ಶೋಪಿಯಾನ್ ನ ಝೈನ್ ಪೋರಾ ಪ್ರದೇಶದ ಬಡಿಗಾಮ್ ಹಳ್ಳಿಯಲ್ಲಿ ಉಗ್ರರು ಅವಿತಿರುವ ಮಾಹಿತಿ ಪಡೆದ ಯೋಧರು ಉಗ್ರರ ಅಡಗುದಾಣವನ್ನು ಸುತ್ತುವರೆದರು. ಈ ವೇಳೆ ಉಗ್ರರು ಯೋಧರತ್ತ ಗುಂಡಿನ ದಾಳಿ ನಡೆಸಿದರು. ಈ ವೇಳೆ ಪ್ರತಿದಾಳಿ ನಡೆಸಿದ ಯೋಧರು ನಾಲ್ವರು ಉಗ್ರರನ್ನು ಕೊಂದು ಹಾಕಿದರು ಎಂದು ಕಾಶ್ಮೀರದ ಐಜಿಪಿ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ಹತ್ಯೆಯಾದ ಉಗ್ರರನ್ನು ಅಖೀಬ್ ಫಾರೂಕ್ ಥೋಕರ್, ವಸೀಮ್ ಅಹ್ಮದ್ ಥೋಕರ್, ಫಾರೂಕ್ ಅಹ್ಮದ್ ಭಟ್ ಮತ್ತು ಶೋಕಿನ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿಯಲ್ಲಿ ಈ ಉಗ್ರರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಜೊತೆಗೆ ಭದ್ರತಾ ಪಡೆಗಳಿಂದ ರೈಫಲ್ ಕಸಿದು ಪರಾರಿಯಾಗಿದ್ದು ಸೇರಿದಂತೆ ೬ ಅಪರಾಧ ಕೃತ್ಯಗಳನ್ನು ಎಸಗಿದ್ದರು ಎಂದು ವಿಜಯ ಕುಮಾರ್ ತಿಳಿಸಿದ್ದಾರೆ. ಬುಧವಾರ ದಕ್ಷಿಣ ಕಾಶ್ಮೀರ ಜಿಲ್ಲೆಯ ಕಕ್ರಾನ್ ಪ್ರದೇಶದಲ್ಲಿ ರಜಪೂತ ಸಮುದಾಯಕ್ಕೆ ಸೇರಿದ ಸತೀಶ್ ಕುಮಾರ್ ಸಿಂಗ್ ಎಂಬ 55 ವ್ಯಕ್ತಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ತಕ್ಷಣವೇ ಕಾರ್ಯಾಚರಣೆಗೆ ಇಳಿದಿರುವ ಭದ್ರತಾ ಪಡೆಗಳು ಹತ್ಯೆಗೆ ಪ್ರತಿಕಾರ ತೀರಿಸಿವೆ.
ಈ ಕಾರ್ಯಾಚರಣೆಗೆ ತರಳುತ್ತಿದ್ದ ಸೇನಾ ವಾಹನ ಅಪಘಾತಕ್ಕೀಡಾಗಿದ್ದರಿಂದ ಮೂವರು ಯೋಧರು ಮೃತಪಟ್ಟಿದ್ದಾರೆ. ಮಳೆಯಿಂದ ಒದ್ದೆಯಾಗಿದ್ದ ರಸ್ತೆಯಲ್ಲಿ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಉರುಳಿದೆ. ಎಂಟು ಗಾಯಾಳು ಸೈನಿಕರಲ್ಲಿ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳು ಸೈನಿಕರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ