ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಾಲಿ ನಟಿ ಎಂಡ್ರೀಲಾ ಶರ್ಮಾ ಅವರಿಗೆ ಇತ್ತೀಚೆಗೆ ಹೃದಯಾಘಾತವಾಗಿತ್ತು. ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆ ಬಳಿಕ ಎಂಡ್ರೀಲಾ ಶರ್ಮಾ ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಇದೀಗ ಎಂಡ್ರೀಲಾ ಶರ್ಮಾ ಪ್ರಿಯಕರ, ನಟ ಸಬ್ಯಸಾಚಿ ಚೌಧರಿ , ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಒಂದನ್ನು ಬರೆಕೊಂಡಿದ್ದಾರೆ. ‘ಎಂಡ್ರೀಲಾ ಶರ್ಮಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಹೃದಯ ಬಡಿತವು ಮುಂಚೆಗಿಂತ ಈಗ ಸುಧಾರಿಸಿದೆ. ಅವರ ರಕ್ತದೊತ್ತಡ ಕೂಡ ಸಾಮಾನ್ಯ ಸ್ಥಿತಿಗೆ ಬಂದಿದೆ. ಸದ್ಯ ಎಂಡ್ರೀಲಾ ಅವರು ಯಾವುದೇ ರೀತಿಯ ಬೆಂಬಲವಿಲ್ಲದೇ ತನಗೆ ಎದುರಾದ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ದಯಮಿಟ್ಟು ಇಲ್ಲಸಲ್ಲದ ವದಂತಿಯನ್ನು ಹಬ್ಬಿಸಬೇಡಿ’ ಎಂದು ಮನವಿ ಮಾಡಿದ್ದಾರೆ.
ಎಂಡ್ರೀಲಾ ಶರ್ಮಾಗೆ ಈ ಹಿಂದೆ ಮಿದುಳು ಸ್ಟ್ರೋಕ್ ಕೂಡ ಉಂಟಾಗಿತ್ತು. ಬಳಿಕ ನ. 1 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೆ ವೇಳೆ ಅವರ ಮೆದುಳಲ್ಲಿ ರಕ್ತಸ್ರಾವ ಕೂಡ ಉಂಟಾಗಿದ್ದು, ವೈದ್ಯರು ಕೆಲ ಶಸ್ತ್ರಚಿಕಿತ್ಸೆ ಮಾಡಿದ್ದರು.ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ವೈದ್ಯರು ಔಷಧಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
ಎಂಡ್ರೀಲಾ ಶರ್ಮಾ ‘ಜುಮುರ್’ ಧಾರಾವಾಹಿ ಮೂಲಕ ಕಿರುತೆಗೆ ಎಂಟ್ರಿ ಕೊಟ್ಟರು. ‘ಜಿಬೊನ್ ಜೋತ್ಯಿ’, ‘ಜಿಯೋನ್ ಕಥಿ’ ಎಂಬ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು.