ಶಿವನ ನಗರಿ ವಾರಾಣಸಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಯನ್ನೂ ಆಧ್ಯಾತ್ಮಿಕತೆಯ ಉತ್ತುಂಗಕ್ಕೆ ಕೊಂಡೊಯ್ಯುವ ಶಕ್ತಿ ಇರುವುದು ಇಲ್ಲಿನ ಘಾಟ್ಗಳಿಗೆ. ಅದರಲ್ಲೂ ಗಂಗಾ ನದಿಯ ತಟದಲ್ಲಿರುವ ‘ಮಣಿಕರ್ಣಿಕಾ ಘಾಟ್’ ಕೇವಲ ಪ್ರವಾಸಿ ತಾಣವಲ್ಲ, ಅದು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಮೋಕ್ಷದ ದ್ವಾರ. ಶಿವ ಮತ್ತು ಪಾರ್ವತಿಯ ದಿವ್ಯ ಆಭರಣಗಳು ಬಿದ್ದ ಪೌರಾಣಿಕ ಇತಿಹಾಸ ಹೊಂದಿರುವ ಈ ಘಾಟ್, ಜೀವನದ ಅಂತ್ಯ ಮತ್ತು ಆಧ್ಯಾತ್ಮದ ಆರಂಭದ ಸಂಕೇತವಾಗಿದೆ. ಜಗತ್ತಿನಾದ್ಯಂತದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುವ ಮಣಿಕರ್ಣಿಕಾ ಘಾಟ್ನ ಇತಿಹಾಸ ಮತ್ತು ವಿಶೇಷತೆ ಇಲ್ಲಿದೆ.
ಮಣಿಕರ್ಣಿಕಾ ಎಂಬ ಹೆಸರು ಸಂಸ್ಕೃತದ ಎರಡು ಪದಗಳಿಂದ ಬಂದಿದೆ. ಮಣಿ (ರತ್ನ) ಮತ್ತು ಕರ್ಣಿಕಾ (ಕಿವಿಯ ಓಲೆ). ಇದರ ಹಿಂದೆ ಎರಡು ಪ್ರಮುಖ ಪೌರಾಣಿಕ ಕಥೆಗಳಿವೆ. ಒಂದು ನಂಬಿಕೆಯ ಪ್ರಕಾರ, ಶಿವ ಮತ್ತು ಪಾರ್ವತಿ ದೇವಿ ಇಲ್ಲಿಗೆ ಭೇಟಿ ನೀಡಿದಾಗ, ಪಾರ್ವತಿ ದೇವಿಯ ಕಿವಿಯ ಓಲೆಯಲ್ಲಿದ್ದ ರತ್ನವು ಇಲ್ಲಿನ ಕಲ್ಯಾಣಿಯಲ್ಲಿ ಬಿದ್ದಿತು. ಅಂದಿನಿಂದ ಈ ಜಾಗಕ್ಕೆ ಮಣಿಕರ್ಣಿಕಾ ಘಾಟ್ ಎಂಬ ಹೆಸರು ಬಂತು.
ಮತ್ತೊಂದು ಕಥೆಯ ಪ್ರಕಾರ, ಭಗವಾನ್ ವಿಷ್ಣುವು ಮಾನವಕುಲದ ಕಲ್ಯಾಣಕ್ಕಾಗಿ ಇಲ್ಲಿ ತನ್ನ ಚಕ್ರದಿಂದ ಒಂದು ಸರೋವರವನ್ನು (ಮಣಿಕರ್ಣಿಕಾ ಕುಂಡ) ತೋಡಿ, ಅದರ ತಟದಲ್ಲಿ ಕಠಿಣ ತಪಸ್ಸು ಮಾಡಿದನು. ವಿಷ್ಣುವಿನ ಭಕ್ತಿಗೆ ಮೆಚ್ಚಿದ ಶಿವನು ಅಲ್ಲಿಗೆ ಬಂದು ತಲೆಯಾಡಿಸಿದಾಗ, ಶಿವನ ಕಿವಿಯ ಓಲೆ ಆ ಕುಂಡದಲ್ಲಿ ಬಿದ್ದಿತು. ಆದ್ದರಿಂದ ಇದಕ್ಕೆ ಮಣಿಕರ್ಣಿಕಾ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಮಣಿಕರ್ಣಿಕಾ ಘಾಟ್ನ ವಿಶೇಷತೆಗಳು:
ಇದು ಜಗತ್ತಿನ ಏಕೈಕ ಸ್ಮಶಾನವಾಗಿದ್ದು, ಇಲ್ಲಿ ವರ್ಷದ 365 ದಿನಗಳೂ, ದಿನದ 24 ಗಂಟೆಯೂ ಚಿತೆಗಳು ಉರಿಯುತ್ತಲೇ ಇರುತ್ತವೆ. ಇಲ್ಲಿ ಎಂದಿಗೂ ಚಿತೆಯ ಬೆಂಕಿ ಆರುವುದಿಲ್ಲ.
ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಕಾಶಿಯಲ್ಲಿ ಮರಣ ಹೊಂದುವವರಿಗೆ ನೇರ ಮೋಕ್ಷ ಸಿಗುತ್ತದೆ. ಅದರಲ್ಲೂ ಮಣಿಕರ್ಣಿಕಾ ಘಾಟ್ನಲ್ಲಿ ಅಂತ್ಯಸಂಸ್ಕಾರ ನಡೆದರೆ, ಆತ್ಮವು ಜನ್ಮ-ಮರಣಗಳ ಚಕ್ರದಿಂದ ಮುಕ್ತಿ ಪಡೆದು ನೇರವಾಗಿ ಶಿವ ಸಲೋಕ್ಯವನ್ನು ಸೇರುತ್ತದೆ. ಸ್ವತಃ ಶಿವನೇ ಇಲ್ಲಿ ಸತ್ತವರ ಕಿವಿಯಲ್ಲಿ ‘ತಾರಕ ಮಂತ್ರ’ವನ್ನು ಉಪದೇಶಿಸಿ ಮೋಕ್ಷ ಕರುಣಿಸುತ್ತಾನೆ ಎಂಬ ನಂಬಿಕೆ ಇದೆ.
ಘಾಟ್ನ ಪಕ್ಕದಲ್ಲೇ ಇರುವ ಈ ಪವಿತ್ರ ಸರೋವರವನ್ನು ವಿಷ್ಣು ನಿರ್ಮಿಸಿದನು ಎಂದು ನಂಬಲಾಗಿದೆ. ಇಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.
ಈ ಘಾಟ್ನ ಬಳಿ ಗಂಗಾ ನದಿಯ ತೀರದಲ್ಲಿ ಒಂದು ಶಿವನ ದೇವಸ್ಥಾನವಿದೆ. ಇದು ಇಟಲಿಯ ಪಿಸಾ ಗೋಪುರದಂತೆ ಒಂದು ಕಡೆಗೆ ವಾಲಿ ನಿಂತಿದೆ. ವರ್ಷದ ಬಹುಪಾಲು ಸಮಯ ಇದು ಗಂಗಾ ನದಿಯ ನೀರಿನಲ್ಲೇ ಮುಳುಗಿರುತ್ತದೆ.
ಟ್ರಾವೆಲ್ ಟಿಪ್ಸ್ :
ಮಣಿಕರ್ಣಿಕಾ ಘಾಟ್ನ ಆಧ್ಯಾತ್ಮಿಕ ದೃಶ್ಯವನ್ನು ನೋಡಲು ಸಂಜೆ ಅಥವಾ ಮುಂಜಾನೆ ಗಂಗಾ ನದಿಯಲ್ಲಿ ದೋಣಿ ವಿಹಾರ ಮಾಡುವುದು ಅತ್ಯುತ್ತಮ ಮಾರ್ಗವಾಗಿದೆ.
ಇಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಿರಂತರವಾಗಿ ನಡೆಯುವುದರಿಂದ, ಚಿತೆಗಳ ಅಥವಾ ಶವಗಳ ಫೋಟೋ ಮತ್ತು ವೀಡಿಯೋ ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರವಾಸಿಗರು ಅಲ್ಲಿನ ಭಾವನೆಗಳಿಗೆ ಗೌರವ ನೀಡಬೇಕು.
ಪ್ರತಿ ವರ್ಷ ರಂಗಭರಿ ಏಕಾದಶಿಯ ಮರುದಿನ, ಇಲ್ಲಿನ ಜನರು ಚಿತೆಯ ಭಸ್ಮದಿಂದ ಹೋಳಿ ಆಡುತ್ತಾರೆ. ಇದನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಬರುತ್ತಾರೆ.



