ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಬಕಾರಿ ನೀತಿ ಹಗರಣದಲ್ಲಿ ಅಕ್ರಮವಾಗಿ ಹಣ ಸಂಗ್ರಹ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಮನೀಶ್ ಸಿಸೋಡಿಯಾ ಅವರು ತಮ್ಮ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನಾನು ಒಬ್ಬನೇ ನೋಡಿಕೊಳ್ಳಬೇಕು ಅದಕ್ಕಾಗಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಮಾರ್ಚ್ 9ರಂದು ಬಂಧಿತರಾಗಿದ್ದ ಸಿಸೋಡಿಯಾ ಅವರು ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೆಹಲಿಯ ಅಬಕಾರಿ ನೀತಿಯನ್ನು ಎಎಪಿ ಸರ್ಕಾರವು ನವೆಂಬರ್ 2021ರಲ್ಲಿ ಜಾರಿಗೊಳಿಸಿತು. ಭ್ರಷ್ಟಾಚಾರದ ಆರೋಪಗಳ ನಡುವೆ ಕಳೆದ ವರ್ಷ ಸೆಪ್ಟೆಂಬರ್ ಕೊನೆಯಲ್ಲಿ ಈ ನೀತಿಯನ್ನು ರದ್ದುಗೊಳಿಸಲಾಯಿತು.
ಸಿಬಿಐ ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಮೇ 30ರಂದು ನ್ಯಾಯಾಲಯವು ವಜಾಗೊಳಿಸಿತ್ತು. ಅವರು ಪ್ರಭಾವಿ ವ್ಯಕ್ತಿ ಮತ್ತು ಅವರ ವಿರುದ್ಧದ ಆರೋಪಗಳ ಮೇಲೆ ಬೇರೆ ಪರಿಣಾಮವನ್ನು ಉಂಟು ಮಾಡಬಹುದು ಎಂದು ರದ್ದು ಮಾಡುವಂತೆ ಸಿಬಿಐ ಅರ್ಜಿಯನ್ನು ಸಲ್ಲಿಸಿತ್ತು. ಆ ಕಾರಣದಿಂದ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿತ್ತು. ಆದರೆ ಮತ್ತೆ ಅವರು ಮಧ್ಯಂತರ ಜಾಮೀನುಯನ್ನು ಸಲ್ಲಿಸಿದ್ದರು, ಆದರೆ ಇದೀಗ ಅವರ ಅರ್ಜಿಯನ್ನು ನಿರಾಕರಿಸಿದೆ.