ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆಗೆ ದೆಹಲಿ ಹೈಕೋರ್ಟ್ ಮುಂದೆ ಹಾಜರಾಗಲು ಸಮ್ಮತಿಸದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ದುರ್ಗೇಶ್ ಪಾಠಕ್ ಅವರನ್ನು ಪ್ರತಿನಿಧಿಸಲು ಮೂವರು ಹಿರಿಯ ವಕೀಲರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸುವುದಾಗಿ ಕೋರ್ಟ್ ಹೇಳಿದೆ.
ನ್ಯಾ.ಸ್ವರ್ಣಕಾಂತ ಶರ್ಮಾ ಅವರ ಮುಂದೆ ವಿಚಾರಣೆಗೆ ಹಾಜರಾಗಲು ಕೇಜ್ರಿವಾಲ್ ಸಹಿತ ಮೂವರು ನಿರಾಕರಿಸಿದ್ದು, ಈ ಹಿನ್ನೆಲೆ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.
ಆರೋಪಿಗಳ ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸ್ವರ್ಣಕಾಂತ ಶರ್ಮಾ ಅವರ ಪೀಠವು, ಅಮಿಕಸ್ ಕ್ಯೂರಿ ಅನುಭವಿ ವಕೀಲರಾಗಿದ್ದು, ಸಮಸ್ಯೆಗಳನ್ನು ನಿವಾರಿಸಲು ಮತ್ತು ವಿಚಾರಣೆಗೆ ಸಹಾಯ ಮಾಡಲು ನೇಮಿಸಲಾಗಿದೆ. ಈ ಕುರಿತು ಶುಕ್ರವಾರ ಆದೇಶ ಹೊರಡಿಸುತ್ತೇನೆ. ಬಳಿಕ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.
ಅಬಕಾರಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ.ಸ್ವರ್ಣಕಾಂತ ಶರ್ಮಾ ಅವರು ವಜಾಗೊಳಿಸಿದ್ದರು. ಈ ಹಿನ್ನೆಲೆ ಕೇಜ್ರಿವಾಲ್, ಸಿಸೋಡಿಯಾ ಹಾಗೂ ಪಾಠಕ್ ಅವರು ಇನ್ಮುಂದೆ ಮುಂದೆ ಕೋರ್ಟ್ ಗೆ ಹಾಜರಾಗುವುದಿಲ್ಲ ಎಂದಿದ್ದರು.



