ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಜ್ಯಸಭೆಯ 72 ಸದಸ್ಯರ ಸದಸ್ಯತ್ವ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೆಲವೊಮ್ಮೆ ಶೈಕ್ಷಣಿಕ ಜ್ಞಾನಕ್ಕಿಂತ ಅನುಭವಕ್ಕೆ ಹೆಚ್ಚಿನ ಮೌಲ್ಯವಿರುತ್ತದೆ. ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾಗುತ್ತಿರುವವರು ಅಪಾರ ಅನುಭವಶಾಲಿಗಳಾಗಿದ್ದೀರಿ. ನಿಮ್ಮ ಅನುಭವಗಳು ರಾಷ್ಟ್ರಹಿತಕ್ಕೆ ಬಳಕೆಯಾಗಬೇಕು. ನಾವು ಈ ಸಂಸತ್ತಿನಲ್ಲಿ ಬಹಳ ಸಮಯ ಕಳೆದಿದ್ದೇವೆ. ಈ ಸದನವು ನಮ್ಮ ಜೀವನಕ್ಕೆ ಸಾಕಷ್ಟು ಕೊಡುಗೆ ನೀಡಿದೆ, ನಾವು ಅದಕ್ಕೆ ಕೊಡುಗೆ ನೀಡಿದ್ದೇವೆ. ಈ ಸದನದ ಸದಸ್ಯರಾಗಿ ಪಡೆದ ಅನುಭವಗಳು ಬೆಲೆಕಟ್ಟಲಾರದ್ದು. ಇಲ್ಲಿ ಪಡೆದ ಅನುಭವಗಳನ್ನು ದೇಶದ ನಾಲ್ಕೂ ದಿಕ್ಕಿಗೆ ಹರಡಿ. ದೇಶವನ್ನು ಮತ್ತಷ್ಟು ಸಬಲಗೊಳಿಸಲು ನಿಮ್ಮ ಅನುಭವಗಳನ್ನು ಧಾರೆಎರೆಯಿರಿ ಎಂದು ಕರೆ ನೀಡಿದರು. ನೀವುಗಳು ಮತ್ತೆ ಸದನಕ್ಕೆ ಬನ್ನಿ ಎಂದು ಆಹ್ವಾನಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಏಪ್ರಿಲ್ನಲ್ಲಿ ಕಾಂಗ್ರೆಸ್ನ ಉಪ ನಾಯಕ ಆನಂದ್ ಶರ್ಮಾ, ಎಕೆ ಆಂಟನಿ, ಸುಬ್ರಮಣಿಯನ್ ಸ್ವಾಮಿ, ಎಂಸಿ ಮೇರಿ ಕೋಮ್ ಮತ್ತು ಸ್ವಪನ್ ದಾಸ್ಗುಪ್ತಾ ಅವರು ನಿವೃತ್ತರಾಗಲಿದ್ದಾರೆ. ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಎಂಜೆ ಅಕ್ಬರ್, ಜೈರಾಮ್ ರಮೇಶ್, ವಿವೇಕ್ ತಂಖಾ, ವಿ ವಿಜಯಸಾಯಿ ರೆಡ್ಡಿ ಅವರ ಅವಧಿ ಜೂನ್ನಲ್ಲಿ ಕೊನೆಗೊಳ್ಳಲಿದೆ. ಜುಲೈನಲ್ಲಿ ಪಿಯೂಷ್ ಗೋಯಲ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿ ಚಿದಂಬರಂ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಸತೀಶ್ ಚಂದ್ರ ಮಿಶ್ರಾ, ಸಂಜಯ್ ರಾವುತ್, ಪ್ರಫುಲ್ ಪಟೇಲ್ ಮತ್ತು ಕೆ ಜೆ ಅಲ್ಫೋನ್ಸ್ ನಿವೃತ್ತಿಯಾಗಲಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ