ಹೊಸ ದಿಗಂತ ವರದಿ, ವಿಜಯನಗರ:
ಸರ್ಕಾರಿ ಸ್ಥಳವನ್ನು ನಮ್ಮದೆಂದು ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಗರಸಭೆ ಸದಸ್ಯ ವೇಣುಗೋಪಾಲ್ ಎನ್ನುವವರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.
ನಿವೇಶನವೊಂದರ ನಕಲಿ ದಾಖಲೆ ಸೃಷ್ಟಿಸಿ ಕಳೆದ 2020 ರಲ್ಲಿ 16 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ಈ ಸ್ಥಳ ಸರ್ಕಾರಕ್ಕೆ ಸೇರಿದ್ದು, ಇದರ ಸಂಪೂರ್ಣ ದಾಖಲೆಗಳನ್ನು ತಿರುಚಲಾಗಿದೆ ಎಂದು ಸಂತೋಷ್ ಎನ್ನುವವರು ದೂರು ನೀಡಿ ಹಣ ಮರಳಿ ನೀಡುವಂತೆ ಮನವಿ ಮಾಡಿದ್ದರು. ಹಣ ಕೊಡಲು ಆಗೋಲ್ಲ ಏನ್ ಬೇಕಾದರೂ ಮಾಡ್ಕೋಳ್ಳಿ, ಕೋರ್ಡ್ ಗೆ ಅಲೆದಾಡಿಸುವಂತೆ ಮಾಡುವೆ ಹುಷಾರ್ ಎಂದು ಬೆದರಿಕೆ ಹಾಕಿದ್ದರು. ಜೊತೆಗೆ ಕೊಲೆ ಮಾಡುವೆ ಎಂದು ಬೆದರಿಕೆ ಹಾಕಿದ್ದರು ಎಂದು ಸಂತೋಷ್ ಕುದುರೆಮೇಟಿ ಅವರು ಕಳೆದ ಆ.27ರಂದು ಹೊಸಪೇಟೆ ನಗರದ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ವೇಣುಗೋಪಾಲ ಅವರನ್ನು ಶುಕ್ರವಾರ ಸಂಜೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ.ಅರುಣಾ ಕೆ.ಅವರು ತಿಳಿಸಿದ್ದಾರೆ.