ಹೊಸದಿಗಂತ ವರದಿ, ಮೈಸೂರು :
ತಾನು ಪ್ರೀತಿಸಿರುವ ಹುಡುಗಿಯನ್ನ ಮದುವೆಯಾಗಲು ಮನೆಯವರು ನಿರಾಕರಿಸಿದ ಹಿನ್ನಲೆಯಲ್ಲಿ ಬೇಸತ್ತ ಯುವಕನೊಬ್ಬ ಕ್ರಿಮಿನಾಶಕ ಔಷಧಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರಿನ ರಂಗಾಚಾರಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಅವಿನಾಶ್(೩೦) ಮೃತ ದುರ್ದೆವಿ.
ರಂಗಾಚಾರಿ ಹುಂಡಿ ಗ್ರಾಮದ ಯುವತಿಯನ್ನ ಅವಿನಾಶ್ ಪ್ರೀತಿಸುತ್ತಿದ್ದ.ಮದುವೆಯಾಗಿ ಬಾಳಸಂಗಾತಿ ಮಾಡಿಕೊಳ್ಳಲು ಇಚ್ಛಿಸಿ, ಈ ಬಗ್ಗೆ ಮನೆಯವರೊಂದಿಗೆ ಪ್ರಸ್ತಾಪ ಮಾಡಿದ್ದ.ಇದಕ್ಕೆ ಮನೆಯವರು ನಿರಾಕರಿಸಿದ್ದರು.
ಇದರಿಂದ ಮನನೊಂದ ಅವಿನಾಶ್ ಕ್ರಿಮಿನಾಶಕ ಔಷಧಿ ಸೇವಿಸಿದ್ದಾನೆ. ಅಸ್ವಸ್ಥಗೊಂಡ ಆತನನ್ನು ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.