ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಫ್ಐಆರ್ ದಾಖಲಿಸಿಕೊಳ್ಳಲು ಪೋಲೀಸರು ನಿರಾಕರಿಸಿದರು ಎಂದು ನ್ಯಾಯಕೇಳಲು ತನ್ನ ನವಜಾತ ಶಿಸುವಿನ ಶವದೊಂದಿಗೆ ಪೋಲೀಸ್ ವರಿಷ್ಠಾಧಿಕಾರಿ ಮನೆಯ ಮುಂದೆ ನೊಂದ ವ್ಯಕ್ತಿ ತೆರಳಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಧನಿರಾಮ್ ಎಂಬ ವ್ಯಕ್ತಿಯೊಬ್ಬರ ಆರುತಿಂಗಳ ಗರ್ಭಿಣಿ ಹೆಂಡತಿಯ ಮೇಲೆ ದುರುಳರಿಬ್ಬರು ಹಲ್ಲೆ ಮಾಡಿದ್ದರು. ಇದರಿಂದಾಗಿ ಆಕೆಗೆ ತೀವ್ರ ಹೊಟ್ಟೆನೋವು ಪ್ರಾರಂಭವಾಯಿತು. ಸ್ಥಳೀಯ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ಧಾವಿಸಿದಾಗ ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು ಮತ್ತು ತಕ್ಷಣವೇ ಅವಳ ಮಗುವನ್ನು ಹೊರತೆಗೆದರು. ಆದರೆ, ಹುಟ್ಟಿದ ಕೆಲವೇ ಸಮಯದಲ್ಲಿ ಮಗು ಸಾವನ್ನಪ್ಪಿದೆ.
ಅದರ ಬೆನ್ನಲ್ಲೇ ಧನಿರಾಮ್ ಹಲ್ಲೆಕೋರರಾದ ಗುಡ್ಡು ಮತ್ತು ರಾಮಸ್ವಾಮಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು ಆದರೆ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಇದರಿಂದಾಗಿ ನೊಂದ ಧನಿರಾಮ್ ತನ್ನ ನಂತರ ಸ್ಥಳೀಯ ನಿವಾಸಿಗಳೊಂದಿಗೆ ನವಜಾತ ಮಗಳ ಶವದೊಂದಿಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾರೆ.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ ಚೌಧರಿ ಅವರು ಧನಿರಾಮ್ ಅವರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದು ಮತ್ತು ತಕ್ಷಣವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಫತೇಹಾಬಾದ್ನ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.