ಹೊಸದಿಗಂತ ಆನ್ಲೈನ್ ಡೆಸ್ಕ್:
ಮಂಗಳೂರಿನ ಕಡಲಿನಲ್ಲಿ ಮುಳುಗಡೆ ಹಂತದಲ್ಲಿರುವ ಎಂ.ವಿ. ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆಯಾಗುವ ಭೀತಿ ಎದುರಾಗಿದೆ.
ತೈಲ ಸೋರಿಕೆಯಾದಲ್ಲಿ ಅದನ್ನು ತಡೆಗಟ್ಟಲು ಗುಜರಾತ್ ಪೋರಬಂದರ್ನಿಂದ ಸಮುದ್ರ ಪಾವಕ್ ಎಂಬ ವಿಶೇಷ ತಂತ್ರಜ್ಞ ನೌಕೆ ಮಂಗಳೂರಿಗೆ ಧಾವಿಸಿ ಬಂದಿದ್ದು, ಕೋಸ್ಟ್ ಗಾರ್ಡ್ ನೌಕೆ, ಹಡಗುಗಳು, ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ಗಳು ಮುಳುಗುತ್ತಿರುವ ಹಡಗಿನ ಸುತ್ತ ಹದ್ದಿನ ಕಣ್ಣಿರಿಸಿವೆ.
ಮಾಹಿತಿಗಳ ಪ್ರಕಾರ ಹಡಗಿನಲ್ಲಿ 150 ಮೆಟ್ರಿಕ್ ಟನ್ಗಳಷ್ಟು ತೈಲ ಸಂಗ್ರಹವಿದೆ. ಸದ್ಯ ಪ್ರಿನ್ಸೆಸ್ ಮಿರಾಲ್ ನೌಕೆ ಪೂರ್ತಿಯಾಗಿ ಮುಳುಗಿಲ್ಲವಾದರೂ, ಸಮುದ್ರ ಪ್ರಕ್ಷುಬ್ಧಗೊಂಡು ನೌಕೆ ಸಂಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆಯ ಸಂಭವನೀಯತೆಯನ್ನು ಅಲ್ಲಗಳೆಯಲಾಗದು.
ಈ ನಡುವೆ ಜಿಲ್ಲಾಡಳಿತ ತೈಲ ಸೋರಿಕೆ ತೊಡಯಲು ಇನ್ನಿಲ್ಲದ ಪ್ರಯತ್ನ ಮುಂದುವರಿಸಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಶನಿವಾರ ಕೋಸ್ಟ್ಗಾರ್ಡ್, ಕರಾವಳಿ ಕಾವಲು ಪೊಲೀಸ್, ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮೀನುಗಾರ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ತೈಲ ಸೋರಿಕೆ ಕಂಡುಬಂದರೆ ವಿಶೇಷ ನೌಕೆ ತಂತ್ರಜ್ಞರು ಸೋರಿಕೆ ತಡೆ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರುವುದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ