ಹೊಸದಿಗಂತ ವರದಿ ಶಿವಮೊಗ್ಗ:
ವಿರೋಧ ಅಭ್ಯರ್ಥಿಗಳು ಯಾರೆಂದು ನನಗೆ ಗೊತ್ತಿಲ್ಲ. ಯಾರು ಯಾವ ಕ್ಷೇತ್ರಕ್ಕೆ ಕರೆಯುತ್ತಾರೋ ಅಲ್ಲಿಗೆ ಹೋಗಿ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತೇನೆ. ಎಲ್ಲರ ಬಗ್ಗೆಯೂ ಗೌರವವಿದೆ. ಇಲ್ಲಿ ಚಿತ್ರರಂಗವೇ ಬೇರೆ.. ಚುನಾವಣೆಯೇ ಬೇರೆ ಎರಡಕ್ಕೂ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂಬ ಮಾತನ್ನು ನಟ ಶಿವರಾಜ್ ಕುಮಾರ್ ಹೇಳಿದರು.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ 61 ವರ್ಷವಾಗಿದೆ. ಯೋಚನೆ ಮಾಡುವ ಶಕ್ತಿ ಇದೆ. ನಾನೇನು ಎಳಸಲ್ಲ. ಬೇರೆ ಪಕ್ಷದವರು ನನ್ನನ್ನು ಕರೆದಿಲ್ಲ, ಕಾಂಗ್ರೆಸ್ನವರು ಕರೆದಿದ್ದಾರೆ ಹೋಗಿದ್ದೇನೆ. ಮೇ 7ರವರೆಗೂ ಬೇರೆ ಬೇರೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆದಿದ್ದಾರೆ ಹೋಗುತ್ತೇನೆ.
ವಿ.ಸೋಮಣ್ಣ ಆತ್ಮೀಯರು, ಪ್ರತಾಪ್ ಸಿಂಹ ನನಗೆ ಚೆನ್ನಾಗಿ ಗೊತ್ತು. ಅವರ ಬಗ್ಗೆಯೂ ಅಪಾರ ಗೌರವ ಇದೆ. ರಾಹುಲ್ ಗಾಂಧಿಯವರ ಫಿಟ್ನೆಸ್, ಭಾರತ್ ಜೋಡೋ ಯಾತ್ರೆ ತುಂಬಾ ಇಷ್ಟವಾಗಿದೆ. ಅವರ ಬಗ್ಗೆಯೂ ಗೌರವ ಇದೆ. ಚಿತ್ರರಂಗವೇ ಬೇರೆ ಚುನಾವಣೆಯೇ ಬೇರೆ. ಹೀಗಾಗಿ ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿಎಂದರು.
ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಸೇವಾ ಕಾರ್ಯ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ. ಅದೇ ರೀತಿ ಸೋಮಣ್ಣನವರು ಮಾಡಿದ್ದಾರೆ. ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹಾಗೆಂದು ಅವರು ನನ್ನ ವಿರೋಧಿಯಲ್ಲ. ನಾವಿಬ್ಬರೂ ಗುಡ್ ಫ್ರೆಂಡ್ಸ್ ಎಂಬ ಮಾತನ್ನು ಹೇಳಿದರು.