ಹೊಸದಿಗಂತ ವರದಿ, ಮಡಿಕೇರಿ:
ಯಾರದೋ ಮಗು ನಮ್ಮದು ಎಂದು ಪ್ರತಿಪಾದಿಸುವುದಕ್ಕೆ ಬದಲಾಗಿ, ಸಾಧನೆಯ ನಿಮ್ಮ ಕೂಸನ್ನು ಹುಡುಕಿಕೊಳ್ಳಿ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಪ್ರತಿ ಪಕ್ಷದ ಪ್ರಮುಖರನ್ನು ಕುಟುಕಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು -ಬೆಂಗಳೂರು ದಶಪಥ ರಸ್ತೆಯ ಸಾಧನೆಯನ್ನು ಕಾಂಗ್ರೆಸ್ನ ಸಿದ್ದರಾಮಯ್ಯ ಸೇರಿದಂತೆ ಇತರರು ತಮ್ಮದೆಂದು ಹೇಳಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ತೀಕ್ಷ್ಣವಾಗಿ ಹೀಗೆ ಪ್ರತಿಕ್ರಿಯಿಸಿದರು.
ದಶಪಥ ಯೋಜನೆಗೆ ಕಾಂಗ್ರೆಸ್ ಚಿಕ್ಕಾಸನ್ನೂ ಒದಗಿಸಿಲ್ಲ. ಪ್ರಸ್ತುತ ಕೇಂದ್ರದ ಬಿಜೆಪಿ ಸರ್ಕಾರ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಸಾಧನೆ ತಮ್ಮದೆನ್ನುವ ಕಾಂಗ್ರೆಸ್ ಮುಖಂಡರು ತಮ್ಮ ಸಾಧನೆಗಳ ಕೂಸನ್ನು ಹುಡುಕಿಕೊಳ್ಳಲಿ ಎಂದು ತಿರುಗೇಟು ನೀಡಿದರು.