ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾವು ಮಾಡಿದ ಭಾಷಣದಿಂದಲೇ ನಟಿ ಉಮಾಶ್ರೀ ಸಂಕಷ್ಟ ಎದುರಿಸುತ್ತಿದ್ದಾರೆ. ರಾಯಚೂರಿನ ಮಸ್ಕಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಟಿ ಉಮಾಶ್ರೀ ಬಳಸಿದ ಪದಬಳಕೆಯಿಂದ ಇದೀಗ ಎಫ್ಐಆರ್ ದಾಖಲಾಗಿದೆ.
ಚುನಾವಣಾ ವೀಕ್ಷಣಾ ತಂಡದ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದು, ಮಸ್ಕಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ನಾಯಕರು ವಿಷಜಂತುಗಳು, ಕೋಮುವಾದ ಸೃಷ್ಟಿಸಿ ಬೆಂಕಿ ಹಚ್ಚುವವರು ಎಂದು ಉಮಾಶ್ರೀ ಭಾಷಣದಲ್ಲಿ ಹೇಳಿದ್ದರು.
ಸಮಾಜದಲ್ಲಿ ಈ ರೀತಿ ಭಾಷಣದಿಂದ ಭಯ ಹಾಗೂ ನೆಮ್ಮದಿರಹಿತ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.