ಹೊಸದಿಗಂತ ವರದಿ, ವಿಜಯಪುರ:
ಪ್ಲಾಸ್ಟಿಕ್ ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಇಬ್ಬರು ಸಜೀವ ದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬಸವನಬಾಗೇವಾಡಿ ಕ್ರಾಸ್ ಹತ್ತಿರ ಶನಿವಾರ ತಡ ರಾತ್ರಿ ನಡೆದಿದೆ.
ಇಲ್ಲಿನ ಅಶೋಕ ದೇಸ್ನೂಯಿ (25), ಲಿಂಬಾರಾಮ ದೇಸ್ನೂಯಿ (35) ಸಜೀವ ದಹನವಾದ ದುರ್ದೈವಿಗಳು.
ಈ ಅಗ್ನಿ ಅವಘಡದಲ್ಲಿ ಇಲ್ಲಿನ ಹೆದ್ದಾರಿ ಪಕ್ಕದಲ್ಲಿದ್ದ ಎರಡು ಪ್ಲಾಸ್ಟಿಕ್ ಅಂಗಡಿಗಳು ಸುಟ್ಟು ಭಸ್ಮವಾಗಿದ್ದು, ರಾತ್ರಿ ಅಂಗಡಿಯಲ್ಲಿ ಮಲಗಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ.
ಅಗ್ನಿ ಅವಘಡ ಸುದ್ದಿ ತಿಳಿದ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿರುವ ಪರಿಣಾಮ ಸಾಲು ಸಾಲಾಗಿದ್ದ ಏಳೆಂಟು ಪ್ಲಾಸ್ಟಿಕ್ ಅಂಗಡಿಗಳು ಬೆಂಕಿಯ ಕೆನ್ನಾಲಿಗೆಯಿಂದ ಬಚಾವ್ ಆಗಿವೆ. ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು.