ಹೊಸದಿಗಂತ ವರದಿ ಮಡಿಕೇರಿ:
ತಡರಾತ್ರಿ ಬೇಟೆಗೆ ಹೋಗಿದ್ದ ನಾಲ್ಕು ಜನರ ಗುಂಪೊಂದು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳಿಬ್ಬರ ಮೇಲೆ ಗುಂಡು ಹಾರಿಸಿದ ಘಟನೆ ಶನಿವಾರ ಸಂತೆ ಬಳಿಯ ಕಣಗಾಲು ಮತ್ತು ಮಾಲಂಬಿ ರಸ್ತೆ ಮಧ್ಯೆ ನಡೆದಿದೆ.
ಗಸ್ತಿನಲ್ಲಿದ್ದ ಪ್ರಕಾಶ್ ಮತ್ತು ವಿಕಾಸ್ ಎಂಬವರಿಗೆ ಬಲಗೈ ಮತ್ತು ಎಡಗೈಗೆ ಗುಂಡು ತಾಗಿ ಗಾಯವಾಗಿದೆ.
ಬೇಟೆಗೆ ಬಂದಿದ್ದವರನ್ನು ಹಿಂಬಾಲಿಸಿ ಹೊರಟಾಗ ಮುಳ್ಳೂರಿನ ಬಳಿ ಬೇಟೆಗೆ ಬಂದಿದ್ದ ಮಹೇಂದ್ರ ಜೀಪ್ ಮರಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಬೇಟೆಗೆ ಬಂದಿದ್ದ ನಾಲ್ವರಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದು, ಧನುಷ್ ಕೆಂಚಮ್ಮನಬಾಣೆ, ರಾಜಶೇಖರ್ ಆನೆಕೆರೆ ಎಂದು ತಿಳಿದುಬಂದಿದೆ.
ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಅದರಲ್ಲಿ ಒಬ್ಬಾತ ಶರತ್ ಎಂಬುದಾಗಿ ತಿಳಿದುಬಂದಿದೆ. ಘಟನೆ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.