September 11, 2026
Friday, September 11, 2026
spot_img

ವಿಜಯ್ ಸರ್ಕಾರದ ಯೋಜನೆಗೆ ವಿರೋಧ: ಹೊಸ ಸಚಿವಾಲಯದ ಜಾಗ ಸ್ಥಳಾಂತರಕ್ಕೆ ಮೀನುಗಾರರು ಪಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೆನ್ನೈನ ಪಟ್ಟಿನಪಾಕ್ಕಂನಲ್ಲಿ ಸುಮಾರು 1,200 ಕೋಟಿ ರೂ. ವೆಚ್ಚದ ಹೊಸ ಸಚಿವಾಲಯ ಹಾಗೂ ವಿಧಾನಸಭೆ ಸಂಕೀರ್ಣ ನಿರ್ಮಾಣದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರದ ಯೋಜನೆಗೆ ಸ್ಥಳೀಯ ಮೀನುಗಾರರು, ಪರಿಸರವಾದಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 26 ಎಕರೆ ವಿಸ್ತೀರ್ಣದ ಈ ಯೋಜನೆಯ ವಿರುದ್ಧ 12 ಹಳ್ಳಿಗಳ ಮೀನುಗಾರರು ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಜೀವನೋಪಾಯಕ್ಕೆ ಹೊಡೆತ, ಸ್ಥಳಾಂತರದ ಭೀತಿ

ಪ್ರಸ್ತಾಪಿತ ಜಾಗದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಪಟ್ಟಿನಪಾಕ್ಕಂ ಮತ್ತು ಮರಿನಾ ಲೂಪ್ ರಸ್ತೆ ಪ್ರದೇಶದ ಸುಮಾರು 1,500 ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿವೆ.

ಈ ಭೂಮಿಯ ಮೇಲೆ ನಮಗೆ ಪರಂಪರಾಗತ ಹಕ್ಕುಗಳು ಹಾಗೂ ಕಾನೂನುಬದ್ಧ ದಾಖಲೆಗಳಿವೆ. ಇಲ್ಲಿನ ಜಾಗವನ್ನು ನಾವು ದೋಣಿಗಳನ್ನು ನಿಲ್ಲಿಸಲು, ಮೀನುಗಾರಿಕೆ ಜಾಲಗಳನ್ನು ಒಣಗಿಸಲು ಮತ್ತು ದಿನನಿತ್ಯದ ಮಾರುಕಟ್ಟೆಗಾಗಿ ಬಳಸುತ್ತಿದ್ದೇವೆ ಎಂದು ಸ್ಥಳೀಯ ಮೀನುಗಾರರ ಮುಖಂಡರು ಹೇಳಿದ್ದಾರೆ.

ಇಲ್ಲಿ ವಿವಿಐಪಿ ಆಡಳಿತ ಕೇಂದ್ರ ನಿರ್ಮಾಣವಾದರೆ ಭದ್ರತೆಯ ನೆಪದಲ್ಲಿ ತಮಗೆ ಸಮುದ್ರಕ್ಕೆ ಇಳಿಯಲು ನಿರ್ಬಂಧ ಹೇರಲಾಗುತ್ತದೆ. ನಮ್ಮನ್ನು ನಗರದ ಹೊರವಲಯದ ಕಣ್ಣಗಿ ನಗರದಂತಹ ದೂರದ ಪ್ರದೇಶಗಳಿಗೆ ಸ್ಥಳಾಂತರಿಸಬಹುದು, ಇದು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನೇ ನಾಶಪಡಿಸುತ್ತದೆ ಎಂದು ನಿವಾಸಿಗಳು ದೂರಿದ್ದಾರೆ.

ಪರಿಸರ ನಾಶ ಹಾಗೂ ಸಂಚಾರ ದಟ್ಟಣೆಯ ಆತಂಕ

ಪರಿಸರವಾದಿಗಳು ಮತ್ತು ವಿವಿಧ ಪಕ್ಷಗಳ ನಾಯಕರು ಈ ಯೋಜನೆಯಿಂದ ಎದುರಾಗಲಿರುವ ಇತರ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ. ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್ ಮಾತನಾಡಿ, ಈ ಕರಾವಳಿ ತೀರವು ಅಪರೂಪದ ‘ಆಲಿವ್ ರಿಡ್ಲಿ ಆಮೆಗಳ’ ಸಂತಾನೋತ್ಪತ್ತಿ ಮಾಡುವ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಅಲ್ಲದೆ ಚಂಡಮಾರುತ ಮತ್ತು ಪ್ರವಾಹದ ಭೀತಿ ಇರುವ ಈ ಜಾಗದಿಂದ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಮತ್ತು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಅವರು, ಸ್ಯಾಂತೋಮ್ ಹೈ ರೋಡ್, ಗ್ರೀನ್‌ವೇಸ್ ರಸ್ತೆ ಮತ್ತು ಪಟ್ಟಿನಪಾಕ್ಕಂ ಜಂಕ್ಷನ್ ಈಗಾಗಲೇ ತೀವ್ರ ಸಂಚಾರ ದಟ್ಟಣೆಯಿಂದ ಕೂಡಿವೆ. ಹೊಸ ಸಚಿವಾಲಯ ಬಂದರೆ ಇಲ್ಲಿನ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲಿದ್ದು, ಯೋಜನೆಯನ್ನು ಚೆನ್ನೈನಿಂದ ಹೊರಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಸರ್ವಪಕ್ಷ ಸಭೆಗೆ ಒತ್ತಾಯ

ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಆರೋಪಿಸಿದ್ದಾರೆ. ಸರ್ಕಾರ ತಕ್ಷಣವೇ ಸರ್ವಪಕ್ಷಗಳ ಸಭೆ ಕರೆದು ಎಲ್ಲರ ಒಪ್ಪಿಗೆಯ ನಂತರವೇ ಪರ್ಯಾಯ ಜಾಗ ಹುಡುಕಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ಚಾಲ್ತಿಯಲ್ಲಿರುವ ‘ಫೋರ್ಟ್ ಸೇಂಟ್ ಜಾರ್ಜ್’ ಸಚಿವಾಲಯ ಸಂಕೀರ್ಣವೇ ಸುಸ್ಥಿತಿಯಲ್ಲಿರುವಾಗ, ಬೃಹತ್ ಮೊತ್ತದ ಹಣವನ್ನು ವ್ಯರ್ಥ ಮಾಡಿ ಹೊಸ ಸಚಿವಾಲಯ ಕಟ್ಟುವ ಅಗತ್ಯವೇನಿದೆ ಎಂದು ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ಪ್ರಶ್ನಿಸಿವೆ. “ಒಬ್ಬನೇ ಒಬ್ಬ ಮೀನುಗಾರನನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಬಿಜೆಪಿ ಸದಾ ಮೀನುಗಾರರ ಪರವಾಗಿ ನಿಲ್ಲಲಿದ್ದು, ಸರ್ಕಾರದ ಈ ದ್ರೋಹದ ವಿರುದ್ಧ ಹೋರಾಡಲಿದ್ದೇವೆ” ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !