ಹೊಸದಿಗಂತ ವರದಿ ಬಾಗಲಕೋಟೆ :
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ರಾಜ್ಯದಲ್ಲಿ ಆಡಳಿತ ನಡೆಸಲು ಅಧಿಕಾರ ನೀಡಿದ್ದಾರೆ. ನಮ್ಮ ಪಕ್ಷದ ಶಾಸಕರು, ಮಂತ್ರಿಗಳು ರಾಜಕೀಯ ಗೊಂದಲ ಹೇಳಿಕೆ ನೀಡಬಾರದು. ತಮ್ಮ ತಮ್ಮ ಕರ್ತವ್ಯ ನಿರ್ವಹಿಸಲು ಗಮನ ಹರಿಸಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸಲಹೆ ನೀಡಿದರು.
ನವನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ದ ಮಹತ್ವಕಾಂಕ್ಷೆ ಗ್ಯಾರಂಟಿ ಯೋಜನೆ ಜಾರಿ ಮಾಡುವ ಜತೆಗೆ ಜನರಿಗೆ ಮುಟ್ಟಿಸುವ ಕೆಲಸವಾದ ಬಳಿಕ ಬಿಜೆಪಿಯವರಿಗೆ ಯಾವುದೇ ವಿಷಯ ಇರಲಿಲ್ಲ ಆದರೆ ಈಗ ಹಸಿದು ಕುಳಿತು ಕೊಂಡಿರುವ ಬಿಜೆಪಿಗೆ ಕಾಂಗ್ರೆಸ್ ನಾಯಕರ ಗೊಂದಲ ಹೇಳಿಕೆ ಆಹಾರವಾಗುತ್ತಿದೆ. ತಮ್ಮ ತಮ್ಮ ಕೆಲಸವನ್ನು ಮಾಡುವ ಮೂಲಕ ರಾಜ್ಯದ ಜನರ ನಂಬಿಕೆ ಉಳಿಸಿಕೊಳ್ಳುವತ್ತ ನಮ್ಮಶಾಸಕರು, ಮಂತ್ರಿಗಳು ಕೆಲಸ ಮಾಡಬೇಕು ಎಂದು ಕೈ ಮುಗಿದು ಕೇಳಿಕೊಂಡರು.
ರಾಜ್ಯದಲ್ಲಿ 214 ತಾಲೂಕಿನಲ್ಲಿ ಬರ ಬಿದ್ದಿದೆ ಅದನ್ನು ಹೊಡೆದೋಡಿಸಲು ಪರಿಹಾರ ಕಂಡುಕೊಳ್ಳಲು ಮಂತ್ರಿಗಳು,ಶಾಸಕರು ಕೆಲಸ ಮಾಡಬೇಕು ಎಂದರು. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ, ಡಿ.ಕೆ.ಶಿವುಕುಮಾರ ಎರಡೂವರೆ ವರ್ಷ ಸಿಎಂ ಆಗಲಿದ್ದಾರೆ ಎಂದು ಅಲ್ಲೊಬ್ಬ ಇಲ್ಲೊಬ್ಬರು ಶಾಸಕರು , ಮಂತ್ರಿಗಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.ಇಂತಹ ಹೇಳಿಕೆಯಿಂದ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ತುಂಬಾ ಬೇಜಾರು ಅನುಭವಿಸಲಿದ್ದಾರೆ.ಮುಖ್ಯಮಂತ್ರಿ ವಿಷಯ ಬದಲಾವಣೆ ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ.ಗೊಂದಲ ಹೇಳಿಕೆ ಬೇಡ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷ ಕಾಶೀನಾಥ ಹುಡೇದ, ಅಲ್ಪಸಂಖ್ಯಾತಘಟಕದ ಯುವ ಮುಖಂಡ ಮಹ್ಮದ ಪತ್ರಿಕಾಗೋಷ್ಠಿ ಯಲ್ಲಿದ್ದರು.