ಯುಕೊ ನಿಯೋಗದಿಂದ ಹಾಲಿ-ಮಾಜಿ ಮುಖ್ಯಮಂತ್ರಿಗಳ ಭೇಟಿ: ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ

ಹೊಸದಿಗಂತ ವರದಿ, ಮಡಿಕೇರಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಯುನೈಟೆಡ್ ಕೊಡವ ಆರ್ಗನೈಝೇಷನ್ (ಯುಕೊ)ನ ನಿಯೋಗ, ಕೊಡವ ಜನಾಂಗವನ್ನು ವಿಶೇಷವಾಗಿ ಆದ್ಯತೆಯೊಂದಿಗೆ ಪರಿಗಣಿಸಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿತು.
ಶಾಸಕರಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರ ಮುಂದಾಳತ್ವದಲ್ಲಿ ಯುಕೊ ಮುಖಂಡ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಇತರರು ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಘೋಷಿತ 10 ಕೋಟಿ ಅನುದಾನವನ್ನು ಕೊಡವ ಅಭಿವೃದ್ಧಿ ನಿಗಮದ ಮೂಲಕವೇ ಹಂಚಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಕೊಡವರು ಭೌಗೋಳಿಕವಾಗಿಯೂ ಜನಸಂಖ್ಯೆಯಲ್ಲಿಯೂ, ಸಂಸ್ಕೃತಿ ಮತ್ತು ಪರಂಪರೆಯ ನಿಟ್ಟಿನಲ್ಲಿಯೂ ವಿಭಿನ್ನವಾಗಿ ಗುರುತಿಸಿಕೊಂಡಿರುವಾಗ, ಬೇರೆ ಸಾಮಾನ್ಯ ಮಾನದಂಡಗಳ ತಳಹದಿಯಲ್ಲಿ ಕೊಡವ ಜನಾಂಗ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಘೋಷಿತ ಅನುದಾನವನ್ನು ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಕ್ಕೆ ತರುವುದು ಅನಿವಾರ್ಯ ಎಂದು ಮನವರಿಕೆ ಮಾಡಿದ ನಿಯೋಗ, ಕೇವಲ ಒಂದು ವರ್ಷದ ಅನುದಾನದಿಂದ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿ ಅಸಾಧ್ಯ. ಆದ್ದರಿಂದ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕವೇ ಶಾಶ್ವತ ಪರಿಹಾರ ಮಾಡಬೇಕೆಂದು ಒತ್ತಾಯಿಸಿತು.
ಕೊಡವ ಅಭಿವೃದ್ಧಿಯ ಹೆಸರಿನಲ್ಲಿ ‌ಕೇವಲ ಸರ್ಕಾರದ ಹಣ ಪೋಲಾಗುವುದು ಬೇಡ. ಇದುವರೆಗೆ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲೇ ಇದ್ದ ಒಕ್ಕಲಿಗ, ಲಿಂಗಾಯತ, ಮರಾಠ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆಯಾಗಿರುವಾಗ ಒಕ್ಕಲಿಗರಂತೆಯೇ 3ಎ ಅಡಿಯಲ್ಲಿಯೇ ಕೊಡವರೂ ಗುರುತಿಸಿಕೊಂಡಿರುವಾಗ ನಮ್ಮನ್ನೂ ಪರಿಗಣಿಸಿ ನಿಗಮ ನೀಡಬೇಕೆಂದು ಆಗ್ರಹಿಸಿದರು.ಅಲ್ಲದೆ ಕೊಡವರ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲೇ ಬೇಕೆಂದು ಮನವರಿಕೆ ಮಾಡಿದರು.
ಮತ್ತೊಮ್ಮೆ ಪರಿಶೀಲಿಸುವೆ: ಮನವಿ ಸ್ವೀಕರಿಸಿ ಚರ್ಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಕೊಡವರ ಬೇಡಿಕೆಯನ್ನು ಆದ್ಯತೆಯೊಂದಿಗೆ ಪರಿಗಣಿಸಿ ಕೊಡವರ ಅಭಿವೃದ್ಧಿಗಾಗಿಯೇ ಪ್ರತ್ಯೇಕವಾಗಿ 10ಕೋಟಿ ರುಪಾಯಿ ನೀಡಲಾಗಿದೆ. ಕೊಡವರ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವ ಇದೆ. ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಮತ್ತೊಮ್ಮೆ ಪರಿಶೀಲಿಸಿ, ಶಾಸಕರು ಹಾಗೂ ಉಸ್ತುವಾರಿ ಸಚಿವರ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು.
ವಿಧಾನ ಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿದ ಯುಕೊ ನಿಯೋಗ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಬೆಂಬಲಿಸುವಂತೆ ಕೋರೊತು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಯಡಿಯೂರಪ್ಪ, ಮುಖ್ಯಮಂತ್ರಿಗಳೊಂದಿಗೆ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಮಾದಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ಮಾದೇಟಿರ ತಿಮ್ಮಯ್ಯ, ನಂದೇಟಿರ ರವಿ ಸುಬ್ಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಅಮ್ಮತ್ತಿ ಕೊಡವ ಸಮಾಜದ ಉಪಾಧ್ಯಕ್ಷ ಕಾವಡಿಚಂಡ ದೀಪಕ್ ಉತ್ತಯ್ಯ, ಕೊಡಗು ಜಿ.ಪಂ. ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ, ಕಾನೂರು ಗ್ರಾ.ಪಂ.ಮಾಜಿ ಸದಸ್ಯೆ ಸುಳ್ಳಿಮಾಡ ಶಿಲ್ಪಾ ಅಪ್ಪಣ್ಣ, ಪುದಿಯೊಕ್ಕಡ ದಿನೇಶ್, ಅಪ್ಪಚ್ಚೀರ ನಂದ, ಕಳ್ಳಿಚಂಡ ರತ್ನ ಪೂವಯ್ಯ, ಮಚ್ಚಮಾಡ ರಮೇಶ್, ತೀತಿಮಾಡ ಬೋಸ್ ಅಯ್ಯಪ್ಪ, ಚಿರಿಯಪಂಡ ವಿಶ್ವನಾಥ್, ಮದ್ರಿರ ಪ್ರಿನ್ಸ್ ಮಹೇಶ್, ಅವರೆಮಾದಂಡ ರಮೇಶ್ ಚಂಗಪ್ಪ, ನಂದೇಟಿರ ಕವಿತಾ ಸುಬ್ಬಯ್ಯ, ಪೂವಮ್ಮ ಸುಬ್ಬಯ್ಯ, ದೇಚಮ್ಮ ಸುಬ್ಬಯ್ಯ, ಕಳ್ಳಿಚಂಡ ದೀನಾ ಉತ್ತಪ್ಪ, ಬೊಳ್ಳಚೆಟ್ಟಿರ ಮೈನಾ ಪ್ರಕಾಶ್, ಮೇವಡ ಲತಾ ನಂಜುಂಡ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪಾಂಡಂಡ ಸ್ವಾತಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!