Thursday, March 23, 2023

Latest Posts

ನಂಜನಗೂಡು ಕ್ಷೇತ್ರ ಸ್ಪರ್ಧೆಯಿಂದ ಹಿಂದೆ ಸರಿದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಹೊಸದಿಗಂತ ವರದಿ, ಮೈಸೂರು:

ಜಿಲ್ಲೆಯ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇದೀಗ ಹಿಂದೆ ಸರಿದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ಧ್ರುವನಾರಾಯಣ್‌ರ ಪುತ್ರ ದರ್ಶನ್‌ಗೆ ಬೆಂಬಲ ಘೋಷಿಸಿದ್ದಾರೆ.

ಬುಧವಾರ ಮೈಸೂರಿನ ವಿಜಯನಗರದಲ್ಲಿರುವ ದಿವಂಗತ ಆರ್.ಧ್ರುವನಾರಾಯಣ್ ಅವರ ನಿವಾಸಕ್ಕೆ ಭೇಟಿ ನೀಡಿದ ಡಾ.ಹೆಚ್.ಸಿ.ಮಹದೇವಪ್ಪ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಬಳಿಕ ದರ್ಶನ್ ಸಮ್ಮುಖದಲ್ಲೇ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದರು.

ನಂಜನಗೂಡು ಕ್ಷೇತ್ರದಿಂದ ನಾನು ಸ್ಪರ್ಧಿಸಲು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಆರ್.ಧ್ರುವನಾರಾಯಣ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವರು ಈಗ ಹಠಾತ್ ನಿಧನರಾಗಿದ್ದಾರೆ. ಅವರ ಸಾವಿನ ದಿನವೇ ನಾನು ನನ್ನ ಆತ್ಮ ಸಾಕ್ಷಿಯಂತೆ ನಿರ್ಧಾರ ಮಾಡಿದ್ದೆ. ನಾನು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಟಿಕೆಟ್‌ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸ್ ಪಡೆಯುತ್ತೇನೆ. ನನ್ನ ಮಗ ಬೇರೆಯಲ್ಲ, ಆರ್.ಧ್ರುವನಾರಾಯಣ್ ಮಗ ದರ್ಶನ್ ಬೇರೆಯಲ್ಲ. ದರ್ಶನ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಅವರ ತಂದೆಯ ಆಸೆಯನ್ನು ಪೂರೈಸಲಿ. ನಾನು ದರ್ಶನ್‌ಗೆ ಬೆಂಬಲ ಕೊಡುತ್ತೇನೆ, ಅವರ ಜೊತೆ ನಿಲ್ಲುತ್ತೇನೆ. ನನ್ನ ಅಭಿಮಾನಿಗಳು ನೋವು, ಬೇಸರ ಮಾಡಿಕೊಳ್ಳದೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ. ನಂಜನಗೂಡು ಕ್ಷೇತ್ರ ಬಿಟ್ಟು ಬೇರೆ ಯಾವ ಕ್ಷೇತ್ರಕ್ಕೂ ಅರ್ಜಿ ಸಲ್ಲಿಸದ ಕಾರಣ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!