ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕವನ್ನು ಸ್ಥಾಪಿಸಲು ದೆಹಲಿಯ “ರಾಷ್ಟ್ರೀಯ ಸ್ಮೃತಿ” ಸಂಕೀರ್ಣದಲ್ಲಿ ಸ್ಥಳವನ್ನು ಮಂಜೂರು ಮಾಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಇಂದು ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಅವರು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯಿಂದ ಜನವರಿ 1ರಂದು ತಮಗೆ ಬಂದ ಪತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ತಂದೆಯ ಸ್ಮಾರಕಕ್ಕೆ ಮೋದಿ ಸರ್ಕಾರ ನೀಡಿರುವ ಅನುಮೋದನೆಯ ಬಗ್ಗೆ ತಿಳಿಸಿದ್ದಾರೆ.
ಇಂದು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳಲು ಭೇಟಿಯಾದ ಶರ್ಮಿಷ್ಠಾ, ನಾವು ಕೇಳದಿದ್ದರೂ ನೀವು ಪರಿಗಣಿಸಿ ಸ್ಮಾರಕ ಮಂಜೂರು ಮಾಡಿರುವುದು ಹೆಚ್ಚು ಸಂತಸ ತಂದಿದೆ. ಪ್ರಧಾನಿಯವರ ಈ ಅನಿರೀಕ್ಷಿತ ನಿರ್ಧಾರದಿಂದ ಮನಸು ತುಂಬಿ ಬಂದಿದೆ. ನನ್ನ ತಂದೆ ರಾಜ್ಯ ಗೌರವಗಳನ್ನು ಕೇಳಬಾರದು, ಅವುಗಳನ್ನು ಸರ್ಕಾರವೇ ನೀಡಬೇಕೆಂದು ಹೇಳುತ್ತಿದ್ದರು. ಅಪ್ಪನ ಸ್ಮರಣೆಯನ್ನು ಗೌರವಿಸಲು ಪಿಎಂ ಮೋದಿ ಅವರು ಇದನ್ನು ಮಾಡಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.
2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಪ್ರಣಬ್ ಮುಖರ್ಜಿ ಅವರು ಐದು ದಶಕಗಳ ರಾಜಕೀಯ ಜೀವನವನ್ನು ನಡೆಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ನಾಯಕರಾದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೊದಲು 2009ರಿಂದ 2012ರವರೆಗೆ ಹಣಕಾಸು ಮಂತ್ರಿ ಸೇರಿದಂತೆ ಪ್ರಮುಖ ಸಚಿವ ಖಾತೆಗಳನ್ನು ಹೊಂದಿದ್ದರು.
ಪ್ರಣಬ್ ಮುಖರ್ಜಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು 2019ರಲ್ಲಿ ಅವರ ಉತ್ತರಾಧಿಕಾರಿಯಾದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರದಾನ ಮಾಡಿದ್ದರು. ಸ್ವತಃ ಮಾಜಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಅವರು ಈ ಹಿಂದೆ ತಮ್ಮ ತಂದೆಯ ಸಾವಿನ ಬಳಿಕ ಕಾಂಗ್ರೆಸ್ ಪಕ್ಷದ ನಡೆದುಕೊಂಡ ರೀತಿಯ ಬಗ್ಗೆ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.