ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಂಟಿಲೇಟರ್ ವೈಫಲ್ಯದಿಂದ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿರುವ ದಾರುಣ ಘಟನೆ ಛತ್ತೀಸ್ಗಢದ ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ರಾತ್ರಿ ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಹಿನ್ನೆಲೆ ವೆಂಟಿಲೇಟರ್ ಸ್ಥಗಿತಗೊಂಡು ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ನಿರ್ಲಕ್ಷ್ಯವೇ ಶಿಶುಗಳ ಸಾವಿಗೆ ಕಾರಣ ಎಂದು ಮಕ್ಕಳ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
ಘಟನೆಯ ಮಾಹಿತಿ ತಿಳಿದ ಸುರ್ಗುಜಾ ಜಿಲ್ಲಾಧಿಕಾರಿ ಕುಂದನ್ ಕುಮಾರ್ ತಕ್ಷಣ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಹೆರಿಗೆ ವಿಭಾಗವನ್ನು ಪರಿಶೀಲಿಸಲಾಯಿತು. ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಆಸ್ಪತ್ರೆಗೆ ತಲುಪಿತು. ಘಟನೆ ಬಗ್ಗೆ ರಾಜ್ಯ ಆರೋಗ್ಯ ಸಚಿವರು ವಿಷಾದ ವ್ಯಕ್ತಪಡಿಸಿ, ಸಚಿವರು ಕೂಡಾ ಅಂಬಿಕಾಪುರಕ್ಕೆ ತೆರಳಿದರು.
ಈ ದುರಂತ ಘಟನೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕುಂದನ್ ಕುಮಾರ್, 4-5 ಗಂಟೆಯೊಳಗೆ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ, ಕರೆಂಟ್ ದೋಷದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗದು. ವೆಂಟಿಲೇಟರ್ಗಳನ್ನು ಸಹ ನಿಲ್ಲಿಸಲಾಗಿಲ್ಲ ಮತ್ತು ಸಂಪೂರ್ಣ ವಿವರಗಳನ್ನು ತನಿಖೆ ಮಾಡಲಾಗುತ್ತಿದೆ ಎಂದರು. ವೆಂಟಿಲೇಟರ್ ಸ್ಥಗಿತಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.