April 18, 2026
Saturday, April 18, 2026
spot_img

ದೆಹಲಿಯಲ್ಲಿ ಭೀಕರ ಸ್ಫೋಟಕ್ಕೆ ಸಂಚು: ನಾಲ್ವರು ಉಗ್ರರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಭೀಕರ ಸ್ಫೋಟಕ್ಕೆ ಸಂಚು ರೂಪಿಸಿದ್ದ ನಾಲ್ವರು ಉಗ್ರರನ್ನು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರದಿಂದ ಪೊಲೀಸರು ಬಂಧಿಸಿದ್ದಾರೆ .

ದೆಹಲಿಯ ಹೆಚ್ಚು ಜನ ದಟ್ಟಣೆ ಇರುವ ಪ್ರದೇಶಗಳನ್ನು ಗುರಿಯಾಗಿಸಿ ಐಇಡಿ ಅಳವಡಿಸಲಾದ ರಿಮೋಟ್-ನಿಯಂತ್ರಿತ ಟಾಯ್ ಕಾರನ್ನು ಬಳಸುವ ಮೂಲಕ ಸ್ಪೋಟಕಕ್ಕೆ ಇಬ್ಬರು ಆರೋಪಿಗಳು ಸಂಚು ರೂಪಿಸಿದ್ದು, ಈ ಕುರಿತು ಖಚಿತ ಮಾಹಿತಿ ಆಧರಿಸಿ ಗುಪ್ತಚರ ಇಲಾಖೆಯ ನೇತೃತ್ವದಲ್ಲಿ ನಡೆದ ಸಂಘಟಿತ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸ್ ವಿಶೇಷ ದಳವು, ಮಹಾರಾಷ್ಟ್ರದ ಇಬ್ಬರು ಮತ್ತು ಒಡಿಶಾ ಮತ್ತು ಬಿಹಾರದಿಂದ ತಲಾ ಒಬ್ಬ ಆರೋಪಿಗಳನ್ನು ಬಂಧಿಸಿದ್ದು, ಸುಧಾರಿತ ಸ್ಫೋಟಕ ಸಾಧನ ಮೊಬೈಲ್, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಿಶೇಷ ಘಟಕದ ಡಿಸಿಪಿ ಪ್ರವೀಣ್ ಕುಮಾರ್ ತ್ರಿಪಾಠಿ, ಈ ನಾಲ್ವರು ಉಗ್ರಗಾಮಿ ಸಿದ್ಧಾಂತದಿಂದ ಹೆಚ್ಚು ಪ್ರಭಾವಿತರಾಗಿದ್ದು, ಆನ್‌ಲೈನ್ ಮೂಲಭೂತವಾದ ಜಾಲಗಳಿಂದ ಪ್ರೇರಿತರಾಗಿದ್ದರು ಎಂದು ತಿಳಿಸಿದರು.

ಆರೋಪಿಗಳು, ಖುರಾಸನ್ ಮೂಲದ ಲಷ್ಕರ್ ರಚನೆ ಮತ್ತು ಖಲೀಫತ್ ಸ್ಥಾಪನೆಯನ್ನು ಪ್ರತಿಪಾದಿಸುವ ವಿಚಾರಗಳಿಂದ ಪ್ರಭಾವಿತರಾಗಿದ್ದು ಮತ್ತು ‘ಘಜ್ವಾ-ಎ-ಹಿಂದ್’ ನಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿದ್ದರು. ಅದಕ್ಕಾಗಿ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಸಕ್ರಿಯರಾಗಿದ್ದರು. ಈ ಮೂಲಕ ಉಗ್ರಗಾಮಿಕ್ಕೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರಲ್ಲಿ ಓರ್ವ ಆರೋಪಿ, ತನ್ನ ಅನುಯಾಯಿಗಳನ್ನು ಮತಾಂಧರನ್ನಾಗಿ ಮಾಡಲು ಸಂಕೇತವಾಗಿ ಕಪ್ಪು ಧ್ವಜದೊಂದಿಗೆ ಕೆಂಪು ಕೋಟೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಹಂಚಿಕೊಂಡಿದ್ದನು. ಮತ್ತೊಬ್ಬ ಆರೋಪಿ ಡಿಸೆಂಬರ್ 2025 ರಲ್ಲಿ ದೆಹಲಿಗೆ ಭೇಟಿ ,ಕೆಂಪು ಕೋಟೆ ಸೇರಿದಂತೆ ಪ್ರಮುಖ ಸ್ಥಳಗಳನ್ನು ಪರಿಶೀಲಿಸಿದ್ದನು. ಜೊತೆಗೆ ಸಂಭಾವ್ಯ ದಾಳಿಗಳ ಬಗ್ಗೆ ಚರ್ಚಿ ನಡೆಸಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ 2023 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಅವರ ಸಹಚರರು, ಜಾಲದ ಬಗ್ಗೆ ಮಾಹಿತಿ ತಿಳಿಯಲು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !