ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಚುನಾವಣಾ ಅಖಾಡಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂಟ್ರಿ ನೀಡಿದ್ದು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಿರುವಳ್ಳೂರು ಜಿಲ್ಲೆಯ ಪೊನ್ನೇರಿಯಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ತಮಿಳು ಅಸ್ಮಿತೆಯ ಮೇಲೆ ದಾಳಿ ನಡೆದಾಗ ನಾನು ಕೂಡ ತಮಿಳಿಗ ಎಂದು ಭಾವನೆ ಮೂಡುತ್ತದೆ. ನನಗೆ ಜಮ್ಮು ಮತ್ತು ಕಾಶ್ಮೀರ ಹೇಗೆ ಮನೆಯಂತಿದೆಯೋ, ತಮಿಳುನಾಡು ಕೂಡ ಗೌರವ ಮತ್ತು ಪ್ರೀತಿಯನ್ನು ನೀಡಿದೆ. ಆದರೆ ಕೇಂದ್ರ ಸರಕಾರ ನಿರಂತರ ದಕ್ಷಿಣ ಭಾರತದ ರಾಜಕೀಯ ಶಕ್ತಿಯನ್ನು ಕುಗ್ಗಿಸಲು ಯತ್ನಿಸುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಪುನರ್ವಿಂಗಡಣೆಯನ್ನು ಪ್ರಸ್ತಾಪಿಸಿದ ರಾಹುಲ್, ಕೇಂದ್ರ ಸರಕಾರ ಜನಸಂಖ್ಯೆಯ ನೆಪವೊಡ್ಡಿ ತಮಿಳುನಾಡಿನ ಸಂಸದೀಯ ಸ್ಥಾನಗಳನ್ನು ಕಡಿಮೆ ಮಾಡಲು ಮುಂದಾಗಿದೆ. ಈ ಮೂಲಕ ದಕ್ಷಿಣ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳ ಬಲವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಟೀಕಿಸಿದರು.
ಮಹಿಳಾ ಮೀಸಲಾತಿ ಮಸೂದೆ ವಿಫಲವಾದ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಇದು ನಿಜವಾದ ಮಹಿಳಾ ಮೀಸಲಾತಿ ಮಸೂದೆಯಾಗಿರಲಿಲ್ಲ. ಚುನಾವಣಾ ಚೌಕಟ್ಟನ್ನು ತಮಗೆ ಬೇಕಾದಂತೆ ಬದಲಿಸಿಕೊಳ್ಳುವ ಬಿಜೆಪಿಯ ಕುತಂತ್ರವಾಗಿತ್ತು. ಆದರೆ ನಾವು ಯಶಸ್ವಿಯಾಗಿ ಅದನ್ನು ಸೋಲಿಸಿದ್ದೇವೆ ಎಂದು ಹೇಳಿದರು.
ಕೇಂದ್ರ ಸರಕಾರ 2023ರಲ್ಲಿ ಅಂಗೀಕಾರವಾಗಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನೇ ತಂದರೆ , ನಾವು ಬೆಂಬಲ ನೀಡುತ್ತೇವೆ ಮತ್ತು ಇಂದೇ ಜಾರಿಗೆ ತರುವಂತೆ ಮಾಡುತ್ತೇವೆ ಎಂದು ಹೇಳಿದರು.



