ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಶುಕ್ರವಾರ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಒಮ್ಮತದ ಮತ ಸಿಗದ ಕಾರಣ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಈ ಬೆನ್ನಲ್ಲೇ ಇದು ಬಿಜೆಪಿ ಅವನತಿ ಆರಂಭವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಹೌರಾದ ಉಲುಬೆರಿಯಾದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ನಾವು ಬಿಜೆಪಿಯನ್ನು ಸೋಲಿಸಿದ್ದೇವೆ. ಇದು ಅವರ ಅವನತಿಯ ಆರಂಭವಾಗಿದ್ದು, ಈಗಾಗಲೇ ಸ್ವಂತ ಬಹುಮತವಿಲ್ಲದೇ ಇತರರ ಬೆಂಬಲದೊಂದಿಗೆ ಅಧಿಕಾರದಲ್ಲಿ ಕುಳಿತಿದ್ದಾರೆ ಎಂದು ದೀದಿ ಟೀಕಿಸಿದರು.
ಬಿಜೆಪಿಕ್ಕಿಂತ ಹೆಚ್ಚು ಮಹಿಳೆಯರಿಗೆ ಮಹತ್ವ ನೀಡುವ ಪಕ್ಷ ಅಂದರೆ ಟಿಎಂಸಿ. ನಾವು ಲೋಕಸಭೆಯಲ್ಲಿ ಶೇ 36ರಷ್ಟು ಪ್ರಾತಿನಿಧ್ಯ ಹೊಂದಿದ್ದರೆ, ರಾಜ್ಯಸಭೆಯಲ್ಲಿ ಶೇ. 46ರಷ್ಟು ಪ್ರಾತಿನಿಧ್ಯ ಹೊಂದಿದ್ದೇವೆ. ಈ ರೀತಿ ಪ್ರಾತಿನಿಧ್ಯ ನೀಡುವ ಪಕ್ಷ ಬೇರೆ ಯಾವುದು ಇಲ್ಲ. ಇದೆಲ್ಲವನ್ನು ಬಿಜೆಪಿ ನಮ್ಮನ್ನು ನೋಡಿ ಕಲಿಯಬೇಕು ಎಂದು ಹೇಳಿದರು.



