ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿವಿಧ ಮೂರು ರಾಜ್ಯಗಳಲ್ಲಿ ಒಟ್ಟು ನಾಲ್ಕು ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ಗೆ ಬೆಂಗಳೂರು ನ್ಯಾಯಾಲಯವು ಇಂದು (ಶುಕ್ರವಾರ) ಬಿಗ್ ರಿಲೀಫ್ ನೀಡಿದೆ. ನಟ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ 48ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ನಟನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಗೊಳಿಸಿತ್ತು. ಈ ವಾರಂಟ್ ಅನ್ನು ಹಿಂಪಡೆಯಲು ನಟ ಪ್ರಕಾಶ್ ರಾಜ್ಗೆ ಇಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ರೂ. 4,000 ನಗದು ಶ್ಯೂರಿಟಿಗೆ ಆದೇಶ
ಪ್ರಕಾಶ್ ರಾಜ್ ಪರ ವಕೀಲರು ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾಗಿ, ಬಂಧನ ವಾರಂಟ್ ಅನ್ನು ಹಿಂಪಡೆಯುವಂತೆ ಮತ್ತು ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ನಟನಿಗೆ ಜಾಮೀನು ಮಂಜೂರು ಮಾಡಿದ್ದಲ್ಲದೆ, 4,000 ರೂಪಾಯಿ ನಗದು ಶ್ಯೂರಿಟಿ ನೀಡುವಂತೆ ಷರತ್ತುಬದ್ಧ ಆದೇಶ ನೀಡಿದ್ದಾರೆ.
ಇದನ್ನೂ ಓದಿ:
ಏನಿದು ನಾಲ್ಕು ವೋಟರ್ ಐಡಿ ವಿವಾದ?
ಚುನಾವಣಾ ನಿಯಮಗಳ ಪ್ರಕಾರ, ಭಾರತದ ಯಾವುದೇ ನಾಗರಿಕನಿಗೆ ಕೇವಲ ಒಂದು ಮಾನ್ಯ ಮತದಾರರ ಗುರುತಿನ ಚೀಟಿ ಹೊಂದಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ನಟ ಪ್ರಕಾಶ್ ರಾಜ್ ದೇಶದ ವಿವಿಧ ಪ್ರಮುಖ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕಾನೂನು ಬಾಹಿರವಾಗಿ ಮತದಾರರ ಚೀಟಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಕೆ. ದಿಲೀಪ್ ಕುಮಾರ್ ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಪ್ರಕಾಶ್ ರಾಜ್ಗೆ ಸದ್ಯಕ್ಕಿದ್ದ ಬಂಧನ ಭೀತಿಯಿಂದ ಪಾರಾಗಿದ್ದಾರೆ.



