ಒಣದ್ರಾಕ್ಷಿ ಖರೀದಿಸಿ, ದ್ರಾಕ್ಷಿ ವರ್ತಕರಿಗೆ ಲಕ್ಷಾಂತ ರೂಪಾಯಿ ವಂಚನೆ

ಹೊಸ ದಿಗಂತ ವರದಿ ವಿಜಯಪುರ:

ಒಣದ್ರಾಕ್ಷಿ ಖರೀದಿಸಿ ಬ್ಯಾಂಕ್ ಖಾತೆಗೆ ಹಣ ಹಾಕುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಗುಜರಾತ್ ಮತ್ತು ರಾಜಸ್ಥಾನ್ ಮೂಲದ ವ್ಯಾಪಾರಿಗಳು ಈ ವಂಚನೆ ನಡೆಸಿ ಪರಾರಿಯಾಗಿದ್ದು, ಇಲ್ಲಿನ ವರ್ತಕರಾದ ಸಿದ್ದಸಿರಿ ಕೋಲ್ಡ್ ಸ್ಟೋರೇಜ್‌ನ ಮ್ಯಾನೇಜರ್ ಸಂತೋಷಕುಮಾರ ಸಿದ್ರಾಮ ಗುಂಜಟಗಿ, ಜಾಕೀರ್ ಹಾಜಿಲಾಲ್ ಭಾಗವಾನ್, ತೌಫೀಖ್ ಸಲೀಂ ಅಂಗಡಿ ಹಾಗೂ ಅಬ್ದುಲ್‌ಖಾದರ ಮಹ್ಮದ್‌ಖಾಸೀಮ ತಹಸೀಲ್ದಾರ್ ಎಂಬವರು ಮೋಸಕ್ಕೆ ಒಳಗಾಗಿದ್ದಾರೆ.

ಒಣದ್ರಾಕ್ಷಿ ಖರೀದಿಸಿ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆಂದು ಹೋದ ವ್ಯಾಪಾರಿಗಳು ಆ ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ಹೀಗಾಗಿ ವ್ಯಾಪಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗುಜರಾತ್ ಮತ್ತು ರಾಜಸ್ಥಾನ್ ಮೂಲದ ಕಮಲಕುಮಾರ ಸೋಹನಲಾಲ್, ಕೃನಾಲಕುಮಾರ ಮಹೇಂದ್ರಕುಮಾರ ಪಟೇಲ, ನೀಲ ದಿನೇಶ್ಬಾಯಿ ಪಟೇಲ, ರೋಣಿಕುಮ್ಮಾರ ಪಟೇಲ, ಭರತಬಾಯಿ ಜೇಟಾಬಾಯಿ ಪಟೇಲ, ಪಿಂಕೇಶ ಸುರೇಶಬಾಯಿ ಪಟೇಲ, ಸಚಿನ್, ಸುನೀಲ, ಜಯೇಶ್, ಭರತ್ ಜೇಟಾಬಾಯಿ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಇಲ್ಲಿನ ಸಿದ್ದಸಿರಿ ಸಂಸ್ಥೆಯ ಸಿದ್ದಸಿರಿ ಕೋಲ್ಡ್ ಸ್ಟೋರೇಜ್‌ನಿಂದ 20,69,049 ರೂ.ಮೌಲ್ಯದ 10.423 ಟನ್, ಜಾಕೀರ್ ಹಾಜಿಲಾಲ್ ಭಾಗವಾನ್ ಎಂಬುವರಿಂದ ಒಟ್ಟು 21,59,598 ರೂ.ಮೌಲ್ಯದ 11.54 ಟನ್ ತೂಕದ ಒಣದ್ರಾಕ್ಷಿ ತುಂಬಿದ 746 ಬಾಕ್ಸ್‌ಗಳನ್ನು ಖರೀದಿಸಿ ತೆಗೆದುಕೊಂಡು ಹೋಗಿದ್ದಾರೆ. ತೌಫೀಕ್ ಅಂಗಡಿ ಇವರಿಂದ 24,29,152 ರೂ. ಮೌಲ್ಯದ 12.755 ಟನ್ ತೂಕದ ಒಣ ದ್ರಾಕ್ಷಿ ಹಾಗೂ ಅಬ್ದುಲ್‌ಖಾದರ ಮಹ್ಮದ್‌ಖಾಸೀಮ ತಹಸೀಲ್ದಾರ್ ಇವರಿಂದ 18,91,451 ರೂ.ಮೌಲ್ಯದ 9.440 ಟನ್ ಒಣದ್ರಾಕ್ಷಿ ಖರೀದಿಸಲಾಗಿದೆ. ಬೇರೆ ಬೇರೆ ದಿನಗಳಲ್ಲಿ ಒಣದ್ರಾಕ್ಷಿ ಖರೀದಿಸಲಾಗಿದ್ದು, ಒಟ್ಟು 85,49,250 ರೂ.ಪಾವತಿಸಬೇಕಿದೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!