ಹೊಸ ದಿಗಂತ ವರದಿ, ಮೈಸೂರು:
ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಶಾಸಕ ಎಸ್.ಎ.ರಾಮದಾಸ್ರ ಕಚೇರಿಯಲ್ಲಿ ಕೋವಿಡ್ ನಿಂದ ಮೃತಪಟ್ಟ 70 ಕುಟುಂಬಗಳಿಗೆ ತಲಾ 1 ಲಕ್ಷ ರೂ ಪರಿಹಾರದ ಚೆಕ್ನ್ನು ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಇದು ಅತ್ಯಂತ ದುಃಖದ ಸಮಯವಾಗಿದೆ, ಕೋವಿಡ್ ನಿಂದ ಅಕಾಲಿಕ ಮರಣ ಹೊಂದಿದ ನಮ್ಮ ಆಪ್ತರನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ. ನಮ್ಮ ಜೀವನದ ಪ್ರಮುಖರನ್ನು ಕಳೆದುಕೊಂಡಿದ್ದೇವೆ. ಅಂತಹವರ ಬೆಂಬಲಕ್ಕೆ ನಿಲ್ಲಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದರು.
ಕೋವಿಡ್ ನಿಂದ ಮೃತಪಟ್ಟವರ ಮಕ್ಕಳು ಎಲ್ಲಿಯವರೆಗೆ ಓದುತ್ತಾರೋ, ಅಲ್ಲಿಯವರೆಗೆ ಓದಿಸುವ ನಿರ್ಧಾರ, ಸ್ವಂತ ಮನೆ ಯಾರಿಗೆ ಇಲ್ಲವೋ ಅವರಿಗೆ ಏಪ್ರಿಲ್ ತಿಂಗಳ ಒಳಗಾಗಿ ಸ್ವಂತ ಸೂರು ಕಲ್ಪಿಸುವುದು ಹಾಗೂ ಆತ್ಮನಿರ್ಭರ ಭಾರತದ ಅಡಿಯಲ್ಲಿ ಬದುಕನ್ನು ಕಟ್ಟಿಕೊಡಲು ಬೇಕಾದ ಸೌಲಭ್ಯಗಳನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಸದಸ್ಯರಾದ ಬಿ.ವಿ.ಮಂಜುನಾಥ್ , ಸೌಮ್ಯ ಉಮೇಶ್, ಶೋಭಾ ಸುನಿಲ್, ಗೀತಾಶ್ರೀ ಯೋಗಾನಂದ್, ಛಾಯಾದೇವಿ, ಶಾಂತಮ್ಮ ವಡಿವೇಲು, ರೂಪ ಯೋಗೇಶ್, ನಗರಪಾಲಿಕೆಯ ವಲಯ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು