ಕಲಬುರಗಿ:
ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಕೊನೆಯ ಕನಸು ಬಹುನಿರೀಕ್ಷಿತ ಗಂಧದಗುಡಿ ಚಿತ್ರ ಶುಕ್ರವಾರ ಪ್ರದರ್ಶನಗೊಂಡಿತು.
ನಗರದಲ್ಲಿ ಸಂಗಮ ಚಿತ್ರಮಂದಿರ, ಶೆಟ್ಟಿ ಚಿತ್ರಮಂದಿರ, ಐನಾಕ್ಸ್ ಹಾಗೂ ಮಿರಾಜ್ ಚಿತ್ರಮಂದಿರ ಎದುರುಗಡೆ ಪುನೀತ್ ಅಭಿಮಾನಿಗಳಿಂದ ಅಪ್ಪು ಕಟೌಟ್ ಗೆ ಕ್ಷೀರಾಭಿಷೇಕ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಿತ್ರ ಮೊದಲ ಶೋ ಆರಂಭಗೊಳ್ಳುವ ಮುನ್ನ ಚಿತ್ರಮಂದಿರ ಎದುರುಗಡೆ ಅಪ್ಪು ಅಪ್ಪು ಅಪ್ಪು ಎಂಬ ಹರ್ಷೋದ್ಘಾರ ಅಭಿಮಾನಿಗಳು ಮೊಳಗಿಸಿದರು. ಗಂಧದಗುಡಿಗೆ ಜೈ, ಅಪ್ಪುಗೆ ಜೈ ಎನ್ನುವ ಮೂಲಕ ಅಪ್ಪುವಿನ ಕಡೆಯ ಚಿತ್ರವಾದ ಗಂಧದಗುಡಿಯನ್ನು ಅಭಿಮಾನಿಗಳು ವಿಜೃಂಭಿಸಿದರು.
ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಎಂಬ ಬೋರ್ಡ್ ನೇತು ಹಾಕಿರುವ ದೃಶ್ಯ ಕಂಡು ಬಂದವು. ಚಿತ್ರಮಂದಿರಗಳ ಎದುರು ವೀಕ್ಷಕರ ದಂಡೆ ಹರಿದು ಬಂದಿತ್ತು. ಚಿತ್ರ ವೀಕ್ಷಣೆ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಂಧದಗುಡಿ ಚಿತ್ರದಲ್ಲಿ ಅಪ್ಪು ಹಾಗೂ ಅಮೋಘವರ್ಷ ಅವರು ಕರುನಾಡಿನ ಒಡಲಾಳದ ಸೌಂದರ್ಯ, ವಿಸ್ಮಯ ಜಗತ್ತನ್ನೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕ ಮಹಾಪ್ರಭುಗಳು.