ಹೊಸದಿಗಂತ ವರದಿ ಶಿವಮೊಗ್ಗ:
ನಗರದ ಕೋಟೆ ರಸ್ತೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಸಂಘಟನಾ ಮಂಡಳಿಯ ಗಣಪತಿಯ ರಾಜಬೀದಿ ಉತ್ಸವ ಅದ್ಧೂರಿಯಿಂದ ಆರಂಭವಾಗಿದೆ. ಕೋಟೆ ರಸ್ತೆಯಲ್ಲಿ ಆರಂಭವಾದ ಮೆರವಣಿಗೆ ಗಾಂಧಿ ಬಜಾರ್ ಪ್ರವೇಶದ ಕಡೆ ಸಾಗಿದೆ.
ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮಹಾಗಣತಿಗೆ ಬೆಳಿಗ್ಗೆ 9.30 ರ ಸುಮಾರಿಗೆ ಪೂಜೆ ನೆರವೇರಿಸಲಾಯಿತು.
ಈ ವೇಳೆ ಸಮಿತಿ ಸದಸ್ಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ, ಮಹಾನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಹಿಂದು ಸಂಘಟನಾ ಮಂಡಳಿ ಅಧ್ಯಕ್ಷ ಸುರೇಶ್ಕುಮಾರ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ನಂತರ ಕೋಟೆ ರಸ್ತೆಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ಕಡೆಗೆ ಮೆರವಣಿಗೆ ನಿಧಾನವಾಗಿ ಸಾಗಿತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ರಸ್ತೆಯುದ್ದಕ್ಕೂ ಮಂದಗತಿಯಲ್ಲೇ ಮೆರವಣಿಗೆ ಸಾಗಿ ಬಂತು. ಶಾಸಕ ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ ಈಶ್ವರಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಸದಸ್ಯರು ಇನ್ನಿತರರು ಹಾಜರಿದ್ದರು.