ಹೊಸದಿಗಂತ ವರದಿ,ಹುಬ್ಬಳ್ಳಿ:
ಭ್ರಷ್ಟಾಚಾರದಲ್ಲಿ ಮುಳುಗಿದ್ದ ಕಾಂಗ್ರೆಸ್ ಸದ್ಯ ಬಿಜೆಪಿ ಸರ್ಕಾರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ಚುನಾವಣಾ ಗಿಮಿಕ್ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನ ಕಾಯಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸ್ವತಃ ಭ್ರಷ್ಟಾಚಾರದ ಗಂಗೋತ್ರಿ ಯಾಗಿದ್ದು, ರಾಜ್ಯ ಸರ್ಕಾರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು.
ಯಾವುದೇ ಸಾಕ್ಷಿಗಳಿಲ್ಲದೇ ಭ್ರಷ್ಟಾಚಾರಕ್ಕೆ ಸಂಬಂಸಿ ಆರೋಪ ಮಾಡುವುದು ಸರಿಯಲ್ಲ. ಇದೆ ರೀತಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪ್ಪಣ ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ ಜೈಲಿಗೂ ಸಹ ಹೋಗಿ ಬಂದಿದ್ದಾರೆ. ಶಾಸಕ ತಿಪ್ಪಾರೆಡ್ಡಿ ವಿರುದ್ಧದ ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೂರು ತಿಂಗಳಲ್ಲಿ ನಿವೃತ್ತಿ ತೆಗೆದುಕೊಳ್ಳುವ ಸ್ಥಿತಿ ಬರಲಿದೆ. ಅವರು ನೀಡುತ್ತಿರುವ ಉಚಿತ ವಿದ್ಯುತ್, ೧೦ ಕೆ.ಜಿ ಅಕ್ಕಿ ನೀಡುವುದು ಪೊಳ್ಳು ಭರವಸೆಗಳಾಗಿವೆ ಎಂದರು.
ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳನ್ನು ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದೆ. ಭ್ರಷ್ಟಾಚಾರದ ಆರೋಪಗಳಿದ್ದರೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಕೊಟ್ಟರೆ, ಅವರು ತನಿಖೆ ಕೈಗೊಳ್ಳುತ್ತಾರೆ ಎಂದರು.
ಪಕ್ಷ ನನಗೆ ಯಾವ ಕ್ಷೇತ್ರಕ್ಕೆ ಹೋಗು ಎನ್ನುತ್ತದೊ ಅಲ್ಲಿಗೆ ಹೋಗುವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಗುಜರಾತ್ ಮಾದರಿ ಬದಲು ಕರ್ನಾಟಕ ಮಾದರಿಯನ್ನು ದೇಶಕ್ಕೆ ನೀಡಲು ನಾವು ಪ್ರಯತ್ನಿಸುತ್ತೇವೆ.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರು, ನಮ್ಮ ಸರ್ವೋಚ್ಚ ನಾಯಕರು. ನಮ್ಮ ಗುರುಗಳು. ಅವರು ಇನ್ನೂ ಹತ್ತು ಸಲ ಚುನಾವಣೆಗೆ ನಿಂತರೂ ಗೆಲ್ಲಿಸುತ್ತೇವೆ ಎಂದು ಹೇಳಿದರು.