ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ.ಮನೋಹರ್ ಕುಮಾರ್ ಅಭಿಮಾನಿ ಬಳಗ ಮತ್ತು ಗೆಜ್ಜೆದಪೂಜೆ ಅಭಿಮಾನಿ ವೃಂದ ಇವರ ಪ್ರೋತ್ಸಾಹದಿಂದ ಸಂಘಟಕ, ಕಾರ್ಯಕ್ರಮದ ರೂವಾರಿ ಡಿ.ಮನೋಹರ್ ಕುಮಾರ್ ಇವರ ನೇತೃತ್ವದಲ್ಲಿ ನವಂಬರ್ ೬ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ಗೆಜ್ಜೆದ ಪೂಜೆ ಯಕ್ಷಯಾತ್ರೆಯ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬಿಡುಗಡೆಗೊಳಿಸಿದರು.
ದ್ವಿತೀಯ ಚಾತುರ್ಮಾಸ್ಯದ ಅವಧಿಯಲ್ಲಿ ಶುಕ್ರವಾರ ಸಂಜೆ ಎಡನೀರು ಶ್ರೀ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಶ್ರೀಗಳವರು ಆಶೀರ್ವಚನವನ್ನು ನೀಡುತ್ತಾ ತುಳು ಯಕ್ಷರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ ಡಿ.ಮನೋಹರ್ ಕುಮಾರ್ ಅನೇಕ ಅಭಿಮಾನಿಗಳನ್ನು ಗಳಿಸಿದ್ದು, ಶ್ರೀ ಮಠದೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಯಕ್ಷಜೀವನ ಉತ್ತುಂಗಕ್ಕೇರಲಿ ಎಂದು ಹರಿಸಿದರು. ಡಿ.ಮನೋಹರ ಕುಮಾರ್ ಶ್ರೀಗಳಿಂದ ಆಶೀರ್ವಾದವನ್ನು ಪಡೆದುಕೊಂಡರು.