ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ Gen-Z ಪ್ರತಿಭಟನಾಕಾರರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಯುವಕರನ್ನು ಅವಹೇಳನ ಮಾಡುವುದು ಸರಿಯಲ್ಲ. ಇಂದಿನ ಯುವಕರೇ ಕಲಾವಿದರನ್ನು ಬೆಳೆಸುವವರು, ಅವರ ಬೆಂಬಲವೇ ಪ್ರತಿಯೊಬ್ಬರ ಯಶಸ್ಸಿನ ಆಧಾರ ಎಂದು ಅವರು ಹೇಳಿದ್ದಾರೆ.
‘ಮಾತನಾಡುವ ಮುನ್ನ ಯೋಚನೆ ಅಗತ್ಯ’
ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, ಕಂಗನಾ ಹೇಳಿಕೆಯನ್ನು ಮೊದಲು ಕೇಳಿರಲಿಲ್ಲ ಎಂದರೂ, ಬಳಿಕ ಮಾಹಿತಿ ತಿಳಿದ ನಂತರ ಅಂತಹ ಪದಗಳನ್ನು ಬಳಸಬಾರದು ಎಂದು ಅಭಿಪ್ರಾಯಪಟ್ಟರು. “ತೂಗಿ ಅಳೆದು ಮಾತನಾಡಬೇಕು. ಜನರೇ ದೇವರ ಮತ್ತೊಂದು ರೂಪ. ಅವರ ಭಾವನೆಗಳಿಗೆ ಗೌರವ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಅವರು ಹೇಳಿದರು.
ಕಂಗನಾ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಇತ್ತೀಚೆಗೆ ಕಂಗನಾ ರನೌತ್, ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಟೀಕಿಸಿ ‘ಜನರೇಷನ್ ಗಟರ್’ ಎಂದು ಕರೆದಿದ್ದರು. ಪ್ರತಿಭಟನೆಯಲ್ಲಿ ಬಳಸಿದ ಭಾಷೆ ಮತ್ತು ವರ್ತನೆಯನ್ನು ಅವರು ಕಟುವಾಗಿ ಟೀಕಿಸಿದ್ದರು. ಈ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಈಗ ಸೋನು ಸೂದ್ ಅವರ ಪ್ರತಿಕ್ರಿಯೆಯೂ ಈ ವಿವಾದಕ್ಕೆ ಮತ್ತಷ್ಟು ರಾಜಕೀಯ ಹಾಗೂ ಸಾಮಾಜಿಕ ಗಮನ ಸೆಳೆದಿದೆ.



