ಹೊಸದಿಗಂತ ವರದಿ,ಚಿತ್ರದುರ್ಗ:
ಕೋವಿಡ್-೧೯ ಸೋಂಕಿನಿಂದ ಮೃತಪಟ್ಟ ಕುಟುಂಬಗಳು ತಪ್ಪದೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಬರುವ ಪರಿಹಾರ ಪಡೆಯಿರಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕೋವಿಡ್-೧೯ ನಿಂದ ಮೃತಪಟ್ಟ ಐದು ಕುಟುಂಬದವರಿಗೆ ತಲಾ ೧ ಲಕ್ಷ ಮೊತ್ತದ ಚಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಕಳೆದ ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಒಂದು ಲಕ್ಷ ಪರಿಹಾರ ನೀಡುತ್ತಿದೆ. ರಾಜ್ಯದಲ್ಲಿ ಸಾವಿರಾರು ಜನರು ಸಾವು ನೋವುಗಳನ್ನು ಅನುಭವಿಸಿದ್ದು ನೂರಾರು ಕುಟುಂಬಗಳು ಕಷ್ಟದಲ್ಲಿರುವುದು ನೋವಿನ ಸಂಗತಿ ಎಂದರು.
ಸರ್ಕಾರದಿಂದ ಬರುವ ಪರಿಹಾರವನ್ನು ಇಲ್ಲಿಯವರೆಗೂ ಯಾರು ಪಡೆದಿಲ್ಲವೋ ಅಂತಹ ಕುಟುಂಬಗಳು ಗ್ರಾಮ ಲೆಕ್ಕಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು. ನಂತರ ಚಿಕಿತ್ಸೆ ಪಡೆದ ಆಸ್ಪತ್ರೆಯಲ್ಲಿ ದಾಖಲೆಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬೇಕು. ಇದರಿಂದ ಕುಟುಂಬಗಳಿಗೆ ಸ್ವಲ್ಪ ಅನುಕೂಲವಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಸರ್ಕಾರ ಈ ನೆರವು ನೀಡುತ್ತಿದ್ದು ಕೇಂದ್ರ ಸರ್ಕಾರದಿಂದ ಸಹ ೫೦ ಸಾವಿರ ನೇರ ಮೃತರ ವಾರಸ್ಥದಾರರ ಖಾತೆಗೆ ಜಮೆ ಮಾಡುತ್ತಾರೆ ಎಂದು ತಿಳಿಸಿದರು.
ಚೆಕ್ ಪಡೆದ ವಾರಸ್ಥಾರರು : ವಿದ್ಯಾನಗರದ ನಾಗೇಂದ್ರ, ಕಾಮನಾಬವಿ ಸರ್ದಾರ್ ಸಾಬ್, ಕೆಳಗೋಟೆ ಸಿದ್ದೇಶ್ವರಿ, ಗೋಪಲಪುರ ಶಂಶುನ್ನಾಸಾ, ಜೋಗಿಮಟ್ಟಿ ರಸ್ತೆ ಹೆಚ್.ಶಿವಣ್ಣ ಅವರಿಗೆ ಒಂದು ಲಕ್ಷದ ಚಕ್ ನೀಡಲಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸತ್ಯನಾರಾಯಣ್, ಹೆಚ್ಚುವರಿ ಕಂದಾಯ ನಿರೀಕ್ಷಕಿ ಮಮತಾ, ಗ್ರಾಮ ಲೆಕ್ಕಧಿಕಾರಿ ಪಾಂಡುರಂಗಪ್ಪ ಮತ್ತುತರರು ಹಾಜರಿದ್ದರು.