ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಪ್ರಮುಖ ‘ಹಿಂದೂ ಈಜವ ಸಮುದಾಯ’ ನಾಯಕ ಹಾಗೂ ಸಿಎಂ ಪಿಣರಾಯಿ ವಿಜಯನ್ಗೆ ಅತ್ಯಂತ ಆಪ್ತರಾಗಿರುವ ವೆಲ್ಲಪಲ್ಲಿ ನಟೇಶನ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶಾಲಾ/ಕಾಲೇಜುಗಳಲ್ಲಿ ಹುಡುಗಿಯರು ಮತ್ತು ಹುಡುಗರು ಒಂದೇ ತರಗತಿಯಲ್ಲಿ ಕುಳಿತುಕೊಳ್ಳುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ ಎಂಬ ಮಾತನ್ನು ಹೇಳಿದ್ದಾರೆ.
ಕೇರಳದ ಎಲ್ಡಿಎಫ್ ಸರ್ಕಾರದ ‘ಲಿಂಗ ತಟಸ್ಥ ನೀತಿ’ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವೆಲ್ಲಪಲ್ಲಿ ನಟೇಶನ್. “ನಾವು ಹುಡುಗಿಯರು ಮತ್ತು ಹುಡುಗರು ತರಗತಿಯಲ್ಲಿ ಒಟ್ಟಿಗೆ ಕುಳಿತುಕೊಳ್ಳುವುದನ್ನು ಬೆಂಬಲಿಸುವುದಿಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಇದೆ. ನಾವು ಅಮೆರಿಕ ಅಥವಾ ಇಂಗ್ಲೆಂಡ್ನಲ್ಲಿ ವಾಸಿಸುತ್ತಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದು, ಅಪ್ಪಿಕೊಳ್ಳುವುದಕ್ಕೆ ಅನುಮತಿಸುವುದಿಲ್ಲ ಎಂದರು.
ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ (UGC) ಉತ್ತಮ ಶ್ರೇಣಿ ಮತ್ತು ಹಣವನ್ನು ಪಡೆಯಲು ಸಾಧ್ಯವಾಗದಿರಲು ಇದು ಒಂದು ಕಾರಣವಾಗಿದೆ. ಕಾಲೇಜುಗಳಲ್ಲಿ 18 ವರ್ಷದೊಳಗಿನ ಹುಡುಗಿಯರು ಮತ್ತು ಹುಡುಗರು ಓದುವಾಗ ಒಟ್ಟಿಗೆ ಕುಳಿತುಕೊಳ್ಳಬಾರದು ಅಥವಾ ಅಪ್ಪುಗೆಯಂತ ಘಟನೆಗಳು ನಡೆಯಬಾರದು. ಒಂದು ನಿರ್ದಿಷ್ಟ ವಯಸ್ಸಿನ ನಂತರ, ಮಕ್ಕಳು ಅವರಿಗೆ ಇಷ್ಟವಾದುದ್ದನ್ನೇ ಮಾಡುತ್ತಾರೆ. ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳುವುದು ನಮ್ಮ ದೇಶಕ್ಕೆ ಅಪಾಯಕಾರಿ ಎಂದು ವೆಲ್ಲಪಲ್ಲಿ ನಟೇಶನ್ ಹೇಳಿದ್ದಾರೆ.