ಹೊಸದಿಗಂತ ವರದಿ ಬಳ್ಳಾರಿ:
ಸಾಮಾಜಿಕ ಕಳಕಳಿಯುಳ್ಳ, ಸಮುದಾಯದ ಯುವ ನಾಯಕ ರಾವೂರ್ ಸುನೀಲ್ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ನೀಡಬೇಕು ಎಂದು ಬಲಿಜ ಸಂಘದ ಜಿಲ್ಲಾಧ್ಯಕ್ಷ ಕೆ.ರಮೇಶ್ (ಬುಜ್ಜಿ) ಅವರು ಒತ್ತಾಯಿಸಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದರು. ಪಕ್ಷಕ್ಕಾಗಿ ಕಳೆದ ಸುಮಾರು ವರ್ಷಗಳಿಂದ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ರಾವೂರ್ ಸುನೀಲ್ ಗೆಲ್ಲುವ ಕುದುರೆ. ಶ್ರೀರಕ್ಷಾ ಫೌಂಡೇಶನ್ ಆಶ್ರಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಗರ ಕ್ಷೇತ್ರದ ಜನರ ವಿಶ್ವಾಸಗಳಿಸಿದ್ದಾರೆ. ಪಕ್ಷದ ವರಿಷ್ಠರು ಈ ಬಾರಿ ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿ ರಾವೂರ್ ಸುನೀಲ್ ಅವರಿಗೆ ಟಿಕೇಟ್ ನೀಡಿದ್ದೇ ಆದಲ್ಲಿ ಸಮುದಾಯದ ಎಲ್ಲ ಜನರು ಉಳಿದ ಸಮುದಾಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಹೆಚ್ಚು ಮತಗಳ ಅಂತರಗಳಿಂದ ಗೆಲ್ಲಿಸಿ ತರುತ್ತೇವೆ, ಇದು ಭರವಸೆಯಲ್ಲ, ಸಮುದಾಯದ ಒಗ್ಗಟ್ಟು ಎಂದರು.
ರಾಜ್ಯದಲ್ಲಿ ಸುಮಾರು 45-50 ಲಕ್ಷ ಜನ ಬಲಿಜ ಸಮುದಾಯದವರಿದ್ದು, ಅದರಲ್ಲೂ ಜಿಲ್ಲೆಯಲ್ಲಿ 1ಲಕ್ಷ ಜನರಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ 28-30 ಸಾವಿರ ಜನರಿದ್ದು, ಗ್ರಾಮೀಣ ಕ್ಷೇತ್ರದಲ್ಲಿ 38ಸಾವಿರಕ್ಕೂ ಹೆಚ್ಚು ಜನರಿದ್ದಾರೆ, ಬಳ್ಳಾರಿ ನಗರ ಕ್ಷೇತ್ರದ ಟಿಕೇಟ್ ನ್ನು ರಾವೂರ್ ಸುನೀಲ್ ಅವರಿಗೆ ನೀಡಿದರೇ ಖಂಡಿತ ಗೆಲ್ಲುವ ಸಾಧಿಸಲಿದ್ದಾರೆ. ಇಲ್ಲದಿದ್ದರೇ ಸಮುದಾಯದ ಮತಗಳು ವಿಭಜನೆಯಾಗಲಿವೆ, ಕಾಂಗ್ರೆಸ್, ಬಿಜೆಪಿ, ಯಾರೇ ಟಿಕೇಟ್ ನೀಡಿದರೂ ಎಲ್ಲರೂ ಒಗ್ಗಟ್ಟುನಿಂದ ರಾವೂರ್ ಸುನೀಲ್ ಅವರ ಗೆಲುವಿಗಾಗಿ ಶ್ರಮಿಸಲಿದ್ದೇವೆ.
ಈಗಾಗಲೇ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಸಕ್ರೀಯವಾಗಿ ಪಕ್ಷ ಚಟುವಟಿಕೆಗಳಲ್ಲಿ ತೊಡಗಿದ್ದು, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ವರಿಷ್ಠರ ಗಮನ ಸೆಳೆದಿದ್ದೇವೆ. ಟಿಕೆಟ್ ಸಿಗುವ ಭರವಸೆಯಿದೆ, ಮತ್ತೊಮ್ಮೆ ಪಕ್ಷದ ನಾಯಕರನ್ನು ಭೇಟಿ ಮಾಡಲಾಗುವುದು, ವರಿಷ್ಠರು ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.