ಹೊಸದಿಗಂತ ಡಿಜಿಟಲ್ ಡೆಸ್ಕ್:
’ಸೇವ್ ಸಾಯಿಲ್’ ಅಭಿಯಾನದಡಿ ಮಣ್ಣು ರಕ್ಷಣೆ ಕುರಿತು ಜಾಗೃತಿಗೆ ಏಕಾಂಗಿ ಬೈಕ್ ಸವಾರಿ ನಡೆಸುತ್ತಿರುವ ‘ಸದ್ಗುರು’ ಜಗ್ಗಿ ವಾಸುದೇವ, ಐರೋಪ್ಯ ರಾಷ್ಟ್ರಗಳಾದ ಆಸ್ಟ್ರಿಯಾ, ಸ್ಲೊವೇನಿಯಾ, ಇಟಲಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಆಸ್ಟ್ರಿಯಾದ ವಿಯೆನ್ನಾದ ಮ್ಯೂಸಿಯಮ್ಸ್ ‘ಕ್ವಾರ್ಟಿಯರ್’ಗೆ ಭೇಟಿ ನೀಡಿದ ಸಂದರ್ಭ ನಿರ್ದೇಶಕ ಬೆಟಿನಾ ಲೀಡ್ಲ್ ಸದ್ಗುರು ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಬಳಿಕ ಅವರು ಅಲ್ಲಿನ ರಾಯಭಾರ ಕಚೇರಿಗೂ ಭೇಟಿ ನೀಡಿದರು. ಆಸ್ಟ್ರಿಯಾದಲ್ಲಿನ ಭಾರತದ ರಾಯಭಾರಿ ಜೈದೀಪ್ ಮಜುಮ್ದಾರ್ ಅವರೊಂದಿಗೆ ಸದ್ಗುರು ಈ ಸಂದರ್ಭ ಕುಶಲೋಪರಿ ನಡೆಸಿದರು.
ಸ್ಲೊವೇನಿಯಾದ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿದ ಸದ್ಗುರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಣ್ಣಿನ ಅದ್ಭುತ ಶಕ್ತಿ ಕುರಿತು ವಿವರಿಸಿದರು. ಇದೇ ವೇಳೆ ನಟ ಗೋರನ್ ವಿಸ್ನ್ಜಿಕ್ ಜತೆಗೆ ಸಂವಾದ ಏರ್ಪಡಿಸಲಾಗಿತ್ತು. ಸ್ಲೊವೇನಿಯಾದ ಭಾರತದ ರಾಯಭಾರಿ ನಮ್ರತಾ ಎಸ್., ಸದ್ಗುರುವಿಗೆ ಸ್ವಾಗತ ಕೋರಿದರು.
ರೋಮ್ನಲ್ಲಿ ಐವರು ಇಟಾಲಿಯನ್ ಕಲಾವಿದರು ಸೇವ್ ಸಾಯಿಲ್ಗೆ ಸಾಥ್ ನೀಡಿದರು. ಈ ಸಂದರ್ಭ ಸದ್ಗುರು, ’ರೋಮ’ ಎಂಬ ಕವಿತೆ ವಾಚಿಸಿ, ಸಂವಾದ ನಡೆಸಿದರು.
ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಸದ್ಗುರು ‘ಸೇವ್ ಸಾಯಿಲ್’ ಅಭಿಯಾನ ಕೈಗೊಂಡಿದ್ದು, ಮಾ.21ರಂದು ಲಂಡನ್ನಿಂದ ಏಕಾಂಗಿಯಾಗಿ ಬೈಕ್ ಪ್ರಯಾಣ ಆರಂಭಿಸಿದ್ದಾರೆ. 27 ರಾಷ್ಟ್ರಗಳಲ್ಲಿ ನೂರು ದಿನಗಳೊಳಗೆ ಒಟ್ಟು 30 ಸಾವಿರ ಕಿ.ಮೀ.ಯನ್ನು ಅವರು ಕ್ರಮಿಸಲಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ