ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ್ ಚಾರ್ ಧಾಮ್ ಭಾರತದ ಹಿಂದೂಗಳ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಭವ್ಯವಾದ ಚಾರ್ ಧಾಮ್ ಯಾತ್ರೆಯು ವಿವಿಧ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಕೈಗೊಂಡ ತೀರ್ಥಯಾತ್ರೆ. ಯಾತ್ರೆ ಆರಂಭವಾಗಿ ಎರಡು ವಾರದಲ್ಲೇ ಸುಮಾರು 39 ಯಾತ್ರಾರ್ಥಿಗಳು ಸಾವನ್ನಪ್ಪಿರುವುದಾಗಿ ಉತ್ತರಾಖಂಡ್ ಸರ್ಕಾರ ತಿಳಿಸಿದೆ. ಜೊತೆಗೆ ಆರೋಗ್ಯ ಸಮಸ್ಯೆ ಇರುವವರು ಯಾತ್ರೆ ಕೈಗೊಳ್ಳದಂತೆ ಮನವಿ ಮಾಡಿದೆ.
ಚಾರ್ಧಾಮ್ ಗಮ್ಯಸ್ಥಾನ ಯಮುನೋತ್ರಿ, ಗಂಗೋತ್ರಿ, ಬದರಿನಾಥ್ ಮತ್ತು ಕೇದಾರನಾಥಗಳನ್ನು ಒಳಗೊಂಡಿದೆ. ಶ್ರೀ ಆದಿ ಶಂಕರಾಚಾರ್ಯರು ಸುಮಾರು 1200 ವರ್ಷಗಳ ಹಿಂದೆ ಚಾರ್ ಧಾಮ್ ಯಾತ್ರೆಯನ್ನು ಕೈಗೊಂಡರು. ಅಂದಿನಿಂದ ಇಂದಿನವರೆಗೂ ಈ ಯಾತ್ರಾ ಸಂಪ್ರದಾಯ ಅವ್ಯಾಹತವಾಗಿ ಮುಂದುವರೆದಿದೆ. ಪ್ರಪಂಚದಾದ್ಯಂತದ ಇರುವ ಪ್ರವಾಸಿಗರು ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳುಗಳಲ್ಲಿ ತೆರೆಯುವ ನಾಲ್ಕು ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ಈ ವರ್ಷ ಮೇ 3ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಯಾತ್ರೆಯ ಪ್ರಾರಂಭದಿಂದ ಇಲ್ಲಿವರೆಗೂ 39 ಜನರು ಸಾವನ್ನಪ್ಪಿರುವುದಾಗಿ ಉತ್ತರಾಖಂಡ ಆರೋಗ್ಯ ಇಲಾಖೆಯ ಡಿಜಿ ಡಾ.ಕೆ.ಎಸ್. ಶೈಲಜಾಭಟ್ ಕಳವಳ ವ್ಯಕ್ತಪಡಿಸಿದರು. ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ, ಆಯಾಸ, ಬೆಟ್ಟ ಹತ್ತುವುದು ಮತ್ತಿತರ ಕಾರಣಗಳಿಂದಾಗಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ವೈದ್ಯಕೀಯ ತೊಂದರೆ ಎದುರಿಸುತ್ತಿರುವ ಪ್ರಯಾಣಿಕರು ಚಾರ್ ಧಾಮ್ಗೆ ತೆರಳದಂತೆ ಡಾ.ಶೈಲಜಾ ಭಟ್ ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.