ಹೊಸದಿಗಂತ ವರದಿ,ಹಾವೇರಿ:
ಕೇಂದ್ರದಲ್ಲಿರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದರ ಮೂಲಕ ಶ್ರೀಸಾಮಾನ್ಯರ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಹೇಳಿದರು.
ಮಂಗಳವಾರ ರಾಣೇಬೆನ್ನೂರ ನಗರದ ಹೊರವಲಯದ ಗೋವಿಂದ ಬಡಾವಣೆಯಲ್ಲಿ ಏರ್ಪಡಿಸಿದ್ದ ಫಲಾನುಭವಿಗಳ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಅನೇಕ ಜನೋಪಯೋಗಿ ಯೋಜನೆಗಳು ಶ್ರೀಸಾಮಾನ್ಯರಿಗೆ ತಲುಪುತ್ತಿವೆ ಎಂದರು.
ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದ್ದು ಇದರಲ್ಲಿ ಯಾವುದೇ ರೀತಿಯ ಪ್ರಭಾವ, ಲಂಚ, ಭ್ರಷ್ಟಾಚಾರ ನಡೆದಿಲ್ಲ. ಮುಂದಿನ ದಿನಮಾನಗಳಲ್ಲಿ ಪಕ್ಷದ ವತಿಯಿಂದ ಇನ್ನು ಹೆಚ್ಚಿನ ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತರಲು ಮುಂದುಗಾವುದಾಗಿ ಅವರು ತಿಳಿಸಿದರು.
ಪಡಿತರ ಅಕ್ಕಿ, ಉಜ್ವಲ ಕಿಸಾನ್ ಸಮ್ಮಾನ್, ಆಶ್ರಯ, ಭಾಗ್ಯಲಕ್ಷ್ಮಿ, ಮಾತೃವಾತ್ಸಲ್ಯ, ಸಂಧ್ಯಾ ಸುರಕ್ಷಾ, ವಿಕಲಚೇತನರ, ಮನೆಮನೆಗೆ ನಲ್ಲಿ, ಗಂಗಾ ಕಲ್ಯಾಣ, ಮನೆ, ಬೆಳೆ ಪರಿಹಾರ ಸೇರಿದಂತೆ ಇನ್ನಿತರ ಯೋಜನೆಗಳ ಫಲಾನುಭವಿಗಳು ಭಾಗವಹಿಸಿದ್ದರು. ಸಂಸದ ಶಿವಕುಮಾರ ಉದಾಸಿ, ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸೇರಿದಂತೆ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ, ಗೋವಿಂದ ಬಡಾವಣೆಯ ಲಂಬಾಣಿ ಮಹಿಳೆಯರು ಲಂಬಾಣಿ ಹಾಡಿನ ಮೂಲಕ ನೃತ್ಯವನ್ನು ಮಾಡಿ ಭವ್ಯವಾಗಿ ನಳೀನಕುಮಾರ ಕಟೀಲು ಅವರನ್ನು ಸ್ವಾಗತಿಸಿಕೊಂಡರು. ನಂತರ ಕಟೀಲವರು ಸೇವಾಲಾಲ್ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು.