ಹೊಸದಿಗಂತ ವರದಿ,ಚಿಕ್ಕಮಗಳೂರು:
ಪ್ರತಿ ವಾರದ ಶನಿವಾರ ಶಾಲಾ ಮಕ್ಕಳಿಗೆ ಒಂದು ಅವಧಿಯನ್ನು ಅಜ್ಜಿ ಕಥೆ ಹೇಳಲು ಮೀಸಲಿಡಲು ಆಲೋಚಿಸಲಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ತಿಳಿಸಿದರು.
ಮನೆಗಳಲ್ಲಿ ಈಗ ಅಜ್ಜಿಯಂದಿರು ಕಥೆ ಹೇಳುವ ಸಂಸ್ಕೃತಿಯೇ ಇಲ್ಲವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಸ್ಥಳೀಯವಾಗಿ ಕಥೆ ಹೇಳು ಆಸಕ್ತಿ ಇರುವ ಅಜ್ಜಿಯರಿಂದ ಶಾಲಾ ಮಕ್ಕಳಿಗೆ ಕಥೆ ಹೇಳಿಸುವ ಬಗ್ಗೆ ಆಲೋಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ೧೫೦ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಲೈಬ್ರರಿಗಳು ಉದ್ಘಾಟನೆಗೆ ಸಿದ್ಧವಾಗಿವೆ. ಒಟ್ಟು ೫೨ ಸಾವಿರ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಲೈಬ್ರರಿಯಲ್ಲಿ ಉಪಯುಕ್ತ ಪುಸ್ತಕಗಳು ಲಭ್ಯವಿದೆ. ಪ್ರತಿ ಶನಿವಾರ ಕಡ್ಡಾಯವಾಗಿ ಮಕ್ಕಳನ್ನು ಲೈಬ್ರರಿಗೆ ಕರೆದೊಯ್ಯಬೇಕು ಎಂದು ಮುಖ್ಯೊಪಾಧ್ಯಾಯರುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ೧೪೪೬ ಸರ್ಕಾರಿ ಶಾಲೆಗಳಿವೆ ೭೧೩೬೨ ಮಕ್ಕಳಿದ್ದಾರೆ. ೬೦ ಕ್ಕಿಂತ ಹೆಚ್ಚು ಮಕ್ಕಳಿರುವ ೩೮೨ ಶಾಲೆಗಳು, ೩೦ ರಿಂದ ೬೦ ಮಕ್ಕಳಿರುವ ೩೧೯ ಶಾಲೆಗಳು, ೩೦ ಕ್ಕಿಂತ ಕಡಿಮೆ ಮಕ್ಕಳಿರುವ ೭೪೫ ಶಾಲೆಗಳಿದ್ದು, ಮಕ್ಕಳೇ ಇಲ್ಲದ ಕಾರಣಕ್ಕೆ ಕಳೆದ ವರ್ಷ ೭ ಶಾಲೆಗಳನ್ನು ಮುಚ್ಚಲಾಗಿದೆ ಎಂದು ವಿವರಿಸಿದರು.