Friday, June 2, 2023

Latest Posts

ಮೋದಿಜೀ ದೇಶಕ್ಕೇ ಡಾಕ್ಟರ್: ಸಚಿವ ಆನಂದ್ ಸಿಂಗ್

ಹೊಸದಿಗಂತ ವರದಿ,ಬಳ್ಳಾರಿ:

ಮಹಾಮಾರಿ ಕೋವಿಡ್-19 ನಿಂದ ದೇಶದ ಜನರನ್ನು ರಕ್ಷಿಸಲು ಮೋದಿಜೀ ಅವರು ಎಲ್ಲರಿಗೂ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದು, ಮೂರನೇ ಅಲೆಯಲ್ಲಿ ಎಲ್ಲರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ, ಮೋದಿಜೀ ಅವರು ದೇಶಕ್ಕೆ ಡಾಕ್ಟರ್ ಆಗಿದ್ದು, ಅವರನ್ನು ಎಷ್ಟು ನೆನೆದರೂ ಸಾಲದು ಎಂದು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ‌ಮಾತನಾಡಿದರು. ಕೋವಿಡ್-19 ಸೊಂಕಿನ ಅರ್ಭಟ ದೇಶದಲ್ಲಿ ಹೆಚ್ಚಾಗುತ್ತಿದ್ದಂತೆ ಮೋದಿಜೀ ಅವರು ತೆಗೆದುಕೊಂಡ ಕಠಿಣ ಕ್ರಮಗಳನ್ನು ಇಡೀ ವಿಶ್ವವೇ ಕೊಂಡಾಡಿದೆ. ದೇಶದ ಜನರಿಗೆ ಉಚಿತ ಲಸಿಕೆ ನೀಡುವಾಗ ಪ್ರತಿಪಕ್ಷಗಳ ನಾಯಕರು, ಇತರರು ಮೋದಿಜಿ ಅವರನ್ನು ಟೀಕಿಸ ತೊಡಗಿದರು. ಯಾವುದಕ್ಕೂ ಅವರು ಕಿವಿಕೊಡದೇ ಎಲ್ಲರಿಗೂ ಉಚಿತವಾಗಿ ಕೋವಿಡ್-19 ಲಸಿಕೆ ವಿತರಿಸುವಲ್ಲಿ ಯಶಸ್ವಿಯಾದರು. ನೂರು ಕೋಟಿ ಜನರಿಗೆ ಮೊದಲ ಡೋಸ್ ಹಾಗೂ ಎರಡನೇ ಡೋಸ್ ಲಸಿಕೆ ನೀಡಿದ ಹಿನ್ನೆಲೆಯಲ್ಲಿ ಮೂರನೇ ಅಲೆ ಭೀತಿ ಕಡಿಮೆಯಾಗಿದೆ. ಲಸಿಕೆ ಪಡೆದ ಪ್ರತಿಯೋಬ್ಬರಲ್ಲೂ ಆತ್ಮಸ್ಥೈರ್ಯ ಹೆಚ್ಚಿಸಿದೆ. ನಾವು ಎರಡು ಡೋಸ್‌ ಪಡೆದಿದ್ದೇವೆ, ಯಾವುದೇ ಸಮಸ್ಯೆ ಎದುರಾಗೋಲ್ಲ ಎನ್ನುವ ವಿಶ್ವಾಸ ಎಲ್ಲರಲ್ಲೂ ‌ಮೂಡಿದೆ. ಆದರೂ, ಎಚ್ಚರಿಕೆ ಇರಲಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ‌ಬೇಡ, ಸರ್ಕಾರದ ನಿಯಮವನ್ನು ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.
ಮೂರನೇ ಅಲೆ, ಒಮಿಕ್ರಾನ್ ತಡೆಗಟ್ಟಲು ಉಭಯ ಜಿಲ್ಲೆಗಳ ಜಿಲ್ಲಾಡಳಿತ ಸನ್ನದ್ಧವಾಗಿದೆ. ವಿಶೇಷವಾಗಿ ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನುದಾನಕ್ಕೂ ಕೊರತೆ ಇಲ್ಲ, ಡಿಎಂಎಪ್ ಬಳಸಿಕೊಳ್ಳಲು ಅವಕಾಶವಿದೆ. ವೈದ್ಯರ ಕೊರತೆ, ಸಿಬ್ಬಂದಿಗಳ ನೇಮಕ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜನರಲ್ಲಿ ಆತಂಕ ಬೇಡ, ಆದರೇ, ಎಚ್ಚರಿಕೆ ಮುಖ್ಯ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಕೂಡದು ಎಂದರು. ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರದ ಸೋಮಲಿಂಗಪ್ಪ, ಸೋಮಶೇಖರ್ ರೆಡ್ಡಿ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!