ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಹೊಸಬರ ಪ್ರಯತ್ನಗಳಿಗೆ ಸಾಕಷ್ಟು ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ, ಇದೇ ರೀತಿ ಹೊಸ ಪ್ರಯತ್ನವೊಂದನ್ನು ಮಾಡಿ ಗೆಲ್ಲುವ ತವಕದಲ್ಲಿದೆ ‘ಆರ’ ಸಿನಿಮಾ ತಂಡ.
ವಿಭಿನ್ನವಾದ ಪೋಸ್ಟರ್ ಮೂಲಕ ‘ಆರ’ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಶನ್ ಮೂಡಿಸಿದೆ, ಸಂಪೂರ್ಣವಾಗಿ ಹೊಸ ತಂಡವೊಂದು ಸಿನಿಮಾ ಮಾಡುತ್ತಿದ್ದು, ಆರಗೆ ಅಶ್ವಿನ್ ವಿಜಯಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಾಯಕನಟನಾಗಿ ಮಿಂಚಿದ ಅಶ್ವಿನ್ ಇದೀಗ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ದಿನೇಶ್ ಬಾಬು ನಿರ್ದೇಶನದ ‘ನನಗಿಷ್ಟ’ ಸಿನಿಮಾದಲ್ಲಿ ನಟನೆ ಮೂಲಕ ಗಮನಸೆಳೆದಿದ್ದ ಅಶ್ವಿನ್ ‘ಕಿನ್ನರಿ’, ‘ಸೇವಂತಿ ಸೇವಂತಿ’ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದಾರೆ. ದೈವ ಹಾಗೂ ದುಷ್ಟಶಕ್ತಿಯ ನಡುವಿನ ಕಥೆ ಆರ. ಸ್ಪಿರಿಚ್ಯುಯಲ್ ಡ್ರಾಮಾ ಜತೆಗೆ ಸಸ್ಪೆನ್ಸ್ ಥ್ರಿಲ್ಲರ್ ಥೀಮ್ನಲ್ಲಿ ಸಿನಿಮಾ ಸಾಗಲಿದ್ದು, ನಿರ್ದೇಶಕರ ಕನಸಿನ ಕೂಸು ಇದಾಗಿದೆ.
ಈಗಿನ ವಾತಾವರಣದಲ್ಲಿ ಕಾಡೊಂದನ್ನು ಉಳಿಸಿಕೊಳ್ಳೋದು ದೊಡ್ಡ ಸವಾಲೇ ಹೌದು, ನಾಯಕನಟ ಯಾವ ಸವಾಲುಗಳನ್ನು ಎದುರಿಸಿ ಕಾಡನ್ನು ಉಳಿಸುತ್ತಾನೆ ಎನ್ನುವ ಸಸ್ಪೆನ್ಸ್ ಅಂಶ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ನಿರ್ದೇಶಕನಾಗಿ ಅಶ್ವಿನ್ ವಿಜಯಮೂರ್ತಿ, ನಾಯಕನಟನಾಗಿ ರೋಹಿತ್, ರೋಹಿತ್ಗೆ ನಾಯಕಿಯಾಗಿ ದೀಪಿಕಾ ಆರಾಧ್ಯ ನಟಿಸಲಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಟ ರೋಹಿತ್ ನಿರ್ವಹಿಸಿದ್ದು ಹೊಸತನವನ್ನು ಕೂಡಿದ ಸಿನಿಮಾ ಇದಾಗಿದೆ.
ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದೆ, ಏಪ್ರಿಲ್-ಮೇನಲ್ಲಿ ಸಿನಿಮಾ ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರ ಮಡಿಲಿಗೆ ಮತ್ತೊಂದು ಉತ್ತಮ ಸಿನಿಮಾ ಸೇರಲಿದೆ.