ದಿನಬಳಕೆ ಆಹಾರದ ಮೇಲೆ ಜಿಎಸ್‌ಟಿ ದರ: ಇಷ್ಟಕ್ಕೂ ಸತ್ಯಾಸತ್ಯತೆ ಏನು???

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ಉತ್ಪನ್ನಗಳ ಮೇಲೆ ಶೇ.5 ರಷ್ಟು ಜಿಎಸ್‌ಟಿ ದರ ವಿಧಿಸುವ ಘೋಷಣೆ ಜಾರಿಗೆ ಬಂದಿದೆ. ಆದರೆ ಇಷ್ಟಕ್ಕೇ ಭಾರೀ ಗುಲ್ಲೆಬ್ಬಿಸಲಾಗಿದೆ. ಮಾಧ್ಯಮಗಳಂತೂ ಎಂದಿನಂತೆ ‘ಬರೆ’, ಇತ್ಯಾದಿ ಪದಗಳನ್ನು ಬಳಸಿವೆ.

ಆದರೆ ಈ ಬಗ್ಗೆ ಸಮಗ್ರ ವರದಿಯನ್ನು ಮಾತ್ರ ಯಾವುದೇ ಮಾಧ್ಯಮಗಳು ಸರಿಯಾಗಿ ಜನರ ಮುಂದೆ ಇಟ್ಟೇ ಇಲ್ಲ ಎಂಬುದು ಖೇದದ ವಿಚಾರ. ಮೊಸರು, ಮಜ್ಜಿಗೆ, ಪನ್ನೀರ್, ಮಾಂಸ, ಮಂಡಕ್ಕಿ ಇತ್ಯಾದಿ ವಸ್ತುಗಳನ್ನು ಪ್ಯಾಕೇಜ್ ಮಾಡಿ ಮಾರಾಟ ಮಾಡಿದಲ್ಲಿ ಶೇ.5 ಜಿಎಸ್‌ಟಿ ದರ ವಿಧಿಸಲಾಗಿದೆ.ಆದರೆ ಇದೇ ವೇಳೆ ಎಲೆಕ್ಟ್ರಿಕ್ ವಾಹನಗಳು, ವಾಹನಗಳ ಬಾಡಿಗೆ ಇತ್ಯಾದಿ ಕಡಿಮೆಯಾಗಿರುವುದನ್ನು ಉಲ್ಲೇಖಿಸುತ್ತಿಲ್ಲ. ಮೊಸರಿನ ಮೇಲೆ ಶೇ.5ರ ಜಿಎಸ್‌ಟಿ ವಿಧಿಸಿದರೆ, ಮೊಸರಿನ ಸಾಗಣೆ ಮೇಲೆ ಶೇ.6ರಷ್ಟು ಕಡಿಮೆ ಮಾಡಲಾಗಿದೆ ಎಂಬುದನ್ನು ಮರೆ ಮಾಚಲಾಗಿದೆ. ಅಂದರೆ ಇಲ್ಲಿ ಶೇ.1 ರಷ್ಟು ಕಡಿಮೆಯಾಗಲಿಲ್ಲವೇ?ಹಾಗಾಗಿಯೇ ಇದೀಗ ಇವುಗಳ ದರ ಮತ್ತೆ ಕಡಿಮೆ ಮಾಡಲಾಗಿದೆ.

ಇನ್ನು ಎಲ್ಲದಕ್ಕೂ ಮೋದಿಯನ್ನು, ಕೇಂದ್ರ ಸರಕಾರವನ್ನು ದೂಷಿಸಲಾಗುತ್ತಿದೆ. ರಕ್ತ ಹೀರುವ ಜಿಗಣೆ ಎಂದೆಲ್ಲ ನಿಂದಿಸಲಾಗುತ್ತಿದೆ. ಆದರೆ ಸತ್ಯ ಏನು? ಈ ಆರೋಪ ಸುಳ್ಳಲ್ಲವೇ? ಯಾಕೆಂದರೆ ಜಿಎಸ್‌ಟಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಇರುವ ಒಂದು ಸಾಂವಿಧಾನಿಕ ಮಂಡಳಿಯಾಗಿದ್ದು, ಇದರ ನಿರ್ಧಾರದಂತೆ ದರ ನಿರ್ಣಯ ಕೈಗೊಳ್ಳುತ್ತದೆ. ಇಲ್ಲಿ ರಾಜ್ಯಗಳಿಗೆ 2\3 ಮತದ ಹಕ್ಕು ಇದ್ದರೆ, ಕೇಂದ್ರ 1\3ರ ಮತ ಹಕ್ಕಿರುತ್ತದೆ. ಅಷ್ಟೇ ಅಲ್ಲದೆ ಶೇ.75ಮತ ಬಂದರೆ ಮಾತ್ರ ಒಂದು ವಸ್ತುವಿನ ದರವನ್ನು ಹೆಚ್ಚಿಸಲು ಅವಕಾಶ ಇರುತ್ತದೆ. ಅರ್ಥಾತ್ ಕೇಂದ್ರ ಸರಕಾರ ಇದರಲ್ಲಿ ಹಸ್ತಕ್ಷೇಪಿಸುವುದಿಲ್ಲ ಎಂದಾಗಿಲ್ಲವೇ?

ಇಂದು ಕಾಂಗ್ರೆಸ್, ಕಮ್ಯುನಿಸ್ಟ್ , ಕೇಜ್ರಿಯ ಆಪ್ ಸೇರಿದಂತೆ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಈ ದರ ಇಳಿಕೆಯ ವಿರುದ್ಧ ಯಾಕೆ ಮತ ನೀಡಿಲ್ಲ?ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಈ ರಾಜ್ಯಗಳೇ ತೆರಿಗೆ ಹಣ ಹೆಚ್ಚಿಸಲು ಒತ್ತಡ ಹೇರುತ್ತವೆ. ಇಂದಿಗೂ ಕಮ್ಯುನಿಸ್ಟ್ ಆಡಳಿತದ ಕೇರಳದಂತಹ ರಾಜ್ಯಗಳಲ್ಲಿ ಪೆಟ್ರೋಲ್ , ಡೀಸೆಲ್ ಬೆಲೆ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ 8-9 ರೂ. ಹೆಚ್ಚಿರುವುದು ಕಟು ಸತ್ಯವಲ್ಲವೇ?ಅಂದರೆ ತೆರಿಗೆ ಹಣ ತಮಗೆ, ನಿಂದೆ ಮಾತ್ರ ಮೋದಿಗೆ ಎಂಬುದು ಇವುಗಳ ನೀತಿ ! ಕೇಜ್ರಿವಾಲ್ ಬಹಿರಂಗದಲ್ಲಿ ಈ ಜಿಎಸ್‌ಟಿ ಇಳಿಸಬೇಕೆಂದು ಹೇಳಿ ಅಗ್ಗದ ತಂತ್ರ ಬಳಸುತ್ತಾರೆ.

ಆರ್ಥಿಕ ವಿಭಾಗಗಳಲ್ಲಿ ಬಿಪಿಎಲ್(ಬಡತನ ರೇಖೆಗಿಂತ ಕೆಳಗೆ), ಇಡಬ್ಲೂಎಸ್ (ಆರ್ಥಿಕ ದುರ್ಬ ವರ್ಗ), ಎಲ್‌ಐಜಿ (ಕಡಿಮೆ ಆದಾಯ ಗುಂಪು) ಎಂಐಜಿ (ಮಧ್ಯಮ ಆದಾಯ ಗುಂಪು), ಎಚ್‌ಐಜಿ (ಹೆಚ್ಚಿನ ಆದಾಯ ಗುಂಪು), ಎಚ್‌ಎನ್‌ಐ (ಉನ್ನತ ನಿವ್ವಳ ಆದಾಯ) ಎಂದು ಗುರುತಿಸಲಾಗುತ್ತಿದ್ದು, ಇಲ್ಲಿ ಮೊದಲ ಮೂರು ವರ್ಗಗಳಿಗೆ ಪ್ಯಾಕ್ಡ್ ಉತ್ಪನ್ನಗಳನ್ನು ಬಳಸದೆ ಇರುವುದನ್ನು ಗಮನಿಸಬೇಕು.ಇಲ್ಲಿ ಕೋಳಿ ಸಾಗಣೆ, ಮೊಸರು ಸಾಗಣೆ ವಾಹನ ದರ ಕಡಿಮೆಯಾಗಿದೆ.

ನಾವಿಂದು ಪೆಟ್ರೋಲಿಯಂ ಉತ್ಪನ್ನಗಳ ಅನಗತ್ಯ ಬಳಕೆ ಕಡಿಮೆ ಮಾಡಬೇಕು.ಭಾರತ ಈ ನಿಟ್ಟಿನಲ್ಲಿ ಸ್ವಾವಲಂಬಿಯಾಗಲು ಇಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಅವುಗಳ ಮೇಲಿನ ತೆರಿಗೆ ಕಡಿಮೆ ಗೊಳಿಸಲಾಗಿದೆ. ಎಥೆನಾಲ್ ಉತ್ಪಾದನೆ ಹೆಚ್ಚಿಸುವುದು, ರಶ್ಯಾದಿಂದ ಕಡಿಮೆ ದರದಲ್ಲಿ ತೈಲ ಆಮದು ಇತ್ಯಾದಿಗಳ ಮೂಲಕ ಮೋದಿ ಸರಕಾರ ಸವಾಲನ್ನು ಹೇಗೆ ಎದುರಿಸುತ್ತಿದೆ ಎಂಬ ಸತ್ಯವನ್ನು ನಾವು ಅರಿಯಬೇಡವೇ?

ಅಮೆರಿಕದಲ್ಲಿ ಶೇ.9.2 ರ ಹಣದುಬ್ಬರ ಇದ್ದರೆ ಬ್ರಿಟನ್ ಹಣದುಬ್ಬರ ಶೇ.9.1ಕ್ಕೇರಿದೆ. ಚೀನಾದಲ್ಲೂ ಹಣದುಬ್ಬರ ಹೆಚ್ಚುತ್ತಿದ್ದು ಜಿಡಿಪಿ ಬೆಳವಣಿಗೆಯನ್ನು ಪುನರ್‌ಪರಿಷ್ಕರಿಸಿ ತಗ್ಗಿಸಲಾಗಿದೆ. ಜಗತ್ತಿನ ಯಾವುದೇ ದೇಶವೂ ಆರ್ಥಿಕ ಹಿಂಜರಿಕೆಯಿಂದ ಪಾರಾಗಿಲ್ಲ ಎಂಬ ಸತ್ಯವನ್ನು ನಾವು ಗುರುತಿಸಬೇಡವೇ? ಭಾರತದಲ್ಲಿ ಶೇ.7.2 ಹಣದುಬ್ಬರ ಇದೆ. ಅಮೆರಿಕದ ಹಣದುಬ್ಬರ ಹೆಚ್ಚಿದ್ದರಿಂದ ಡಾಲರ್ ತನ್ನ ಮೊತ್ತವನ್ನು ಹೆಚ್ಚಿಸಿ ಕರೆನ್ಸಿ ದರ ಕಡಿಮೆ ಮಾಡುತ್ತಿರುವುದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ. ಇದರ ನಡುವೆಯೂ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ರೂಪಾಯಿ ಮೂಲಕ ನಡೆಸಲು ಆರ್‌ಬಿಐ ಈಗ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ರೂಪಾಯಿ ಕೂಡಾ ಮರಳಿ ಮೌಲ್ಯಯುತವಾಗುವ ವಿಶ್ವಾಸವಿದೆ.

ಆದರೆ ಅತೃಪ್ತ ಶಕ್ತಿಗಳು, ಘಾತಕ ಶಕ್ತಿಗಳು ಭಾರತ ದುರ್ಬಲವಾಗುವುದನ್ನು ಬಯಸುತ್ತವೆ. ಇದಕ್ಕಾಗಿಯೇ ಜನರಲ್ಲಿ ಬೆಲೆ ಏರಿಕೆ ಎಂದು ಹುಯಿಲೆಬ್ಬಿಸಿ ಜನರನ್ನು ದೇಶದ ಉನ್ನತಿಯ ಕಡೆಗೆ ಯೋಚಿಸುವ ಬದಲಿಗೆ ಸ್ವಾರ್ಥದೆಡೆಗೆ ಯೋಚಿಸುವಂತೆ ಕುಮ್ಮಕ್ಕು ನೀಡುತ್ತಿವೆ. ಕಾಂಗ್ರೆಸ್ ಅಥವಾ ಇತರ ಯಾವುದೇ ಸರಕಾರಗಳು ತೆರಿಗೆ ಹೇರದೆ ದೇಶದ ಆರ್ಥಿಕತೆಯನ್ನು ಬಲಗೊಳಿಸಬಲ್ಲೆವು ಎಂದು ಹೇಳಬಲ್ಲವೇ? ಹೀಗಿದ್ದೂ ಇಂತಹ ಬೂಟಾಟಿಕೆ, ಆಷಾಢಭೂತಿತನವನ್ನು ಜನರು ಧಿಕ್ಕರಿಸಬೇಡವೇ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!