ಹೊಸದಿಗಂತ ವರದಿ, ವಿಜಯನಗರ:
ಕೋವಿಡ್-19 ಹಿನ್ನೆಲೆಯಲ್ಲಿ ಗೈಡ್ಸ್ಗಳ ಸ್ಥಿತಿ ಅಯೋಯಮಯವಾಗಿದ್ದು, ಸರ್ಕಾರ ಕೂಡಲೇ ಪ್ರತಿ ತಿಂಗಳು ಗೌರವಧನ ನೀಡಬೇಕು ಎಂದು ಹಂಪಿ ಗೈಡ್ಸ್ ಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಂಪಿಯ ಶ್ರೀ ವಿರುಪಾಕ್ಷೇಶ್ವರ ಸನ್ನಿಧಾನದ ಎದುರು ಜಮಾಯಿಸಿದ ಪ್ರವಾಸಿ ಮಾರ್ಗದರ್ಶಿಗಳು, ಕಳೆದ ವರ್ಷ ನಮ್ಮ ಸ್ಥಿತಿ ಕಂಡು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ಮೂರ್ತಿ ಅವರು, ಲಾಕ್ ಡೌನ್ ಸಂದರ್ಭದಲ್ಲಿ 250 ಪ್ರವಾಸಿ ಮಾರ್ಗದರ್ಶಿಗಳಿಗೆ ತಲಾ 10 ಸಾವಿರ ರೂ.ಗಳನ್ನು ಖಾತೆಗೆ ಜಮಾ ಮಾಡಿ, ನಮ್ಮ ಕಷ್ಟಕ್ಕೆ ನೆರವಾಗಿದ್ದರು. ಆದರೇ, ಸರ್ಕಾರಕ್ಕೆ ಯಾಕೆ ನಮ್ಮ ಸಮಸ್ಯೆ ಅರ್ಥವಾಗುತ್ತಿಲ್ಲ, ಲಾಕ್ ಡೌನ್, ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ ಎಂದು ಸರ್ಕಾರ ನಿರ್ಭಂಧ ಹೇರುತ್ತಿರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ, ನಮ್ಮ ಬದುಕು ಹೇಗೆ ಎಂಬುದು ತಿಳಿಯದಾಗಿದೆ.
ಸರ್ಕಾರ ನಮ್ಮ ಸಮಸ್ಯೆ ಅರಿತು ಕೂಡಲೇ ನಾನಾ ಸೌಲಭ್ಯಗಳನ್ನು ಕಲ್ಪಿಸುವದರ ಜೊತೆಗೆ ತಿಂಗಳ ಗೌರವದನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೋವಿಡ್-19 ಹಿನ್ನೆಲೆ ಜನಸಾಮಾನ್ಯರು ಹಂಪಿ ಯಿಂದ ದೂರ ಉಳಿದಿದ್ದರು. ಕಳೆದ ಎರಡ್ಮೂರು ತಿಂಗಳಿಂದ ಪ್ರವಾಸೋದ್ಯಮ ಮತ್ತೆ ಚೇತರಿಕೆ ಕಾಣುವಷ್ಟರಲ್ಲೇ ಮತ್ತೆ ಮೂರನೇ ಅಲೆ ಅರ್ಭಟ ಶುರುವಾಗಿದೆ. ನಮ್ಮ ಗೈಡ್ಸ್ ಗಳ ನೆಮ್ಮದಿ ಬದುಕನ್ನೇ ಕೊರೊನಾ ಕಡಿದು ಕೊಂಡಿದೆ. ನಾನಾ ನಿಯಮ ನಿರ್ಭಂಧಿಸಿದ ಹಿನ್ನೆಲೆ ಹಂಪಿ ಮತ್ತೆ ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ.
ಇದರಿಂದ ನಮ್ಮ ಜೀವನ ಮೂರಾಬಟ್ಟೆಯಾಗಿದೆ, ಕೂಡಲೇ ಸರ್ಕಾರ ಹಂಪಿ ಸೇರಿದಂತೆ ರಾಜ್ಯದ ಎಲ್ಲ ಗೈಡ್ಸ್ ಗಳಿಗೂ ತಿಂಗಳ ಗೌರವ ಧನ ನೀಡಬೇಕು, ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶ್ರೀವಿದ್ಯಾರಣ್ಯ ಪ್ರವಾಸಿ ಮಾರ್ಗದರ್ಶಿ ಸಂಘ ಅಧ್ಯಕ್ಷ ಗೋಪಾಲ .ವಿ ಉಪಾಧ್ಯಕ್ಷ ಜೆ. ನಾಗರಾಜ, ಪ್ರದಾನ ಕಾರ್ಯದರ್ಶಿ ಹೆಚ್ ಬಸವರಾಜ,ಗೋಪಿನಾಥ್,ಮತ್ತು ಕೃಷ್ಣದೇವರಾಯ ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಎ.ಶಿವಕುಮಾರ್, ಉಪಾಧ್ಯಕ್ಷರು ಹೇಮಂತ್ ಪ್ರದಾನ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ ಸೇರಿದಂತೆ ಹಲವು ಮಾರ್ಗದರ್ಶಿಗಳಿದ್ದರು