ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾನವ್ಯಾಪಿ ಮಸೀದಿಯ ಒಳಗೆ ಸರ್ವೇ ನಡೆಸಲು ಹೇಳಿರುವ ಕೋರ್ಟ್ ಆದೇಶಕ್ಕೆ ವಿರೋಧದ ಬೆನ್ನಲ್ಲೇ ಮಸೀದಿಯ ಆಡಳಿತ ಮಂಡಳಿಯ ಪರವಾಗಿ ಕೆಲ ವ್ಯಕ್ತಿಗಳು ವೀಡಿಯೋ ತಂಡದವರನ್ನು ಗೇಟಿನಿಂದ ಹೊರಗೇ ತಡೆಹಿಡಿದಿದ್ದಾರೆ.
ಈ ಕುರಿತು ಮಸೀದಿಯ ಆಡಳಿತ ಮಂಡಳಿಯಾದ ಅಂಜುಮನ್ ಇಂತಜಾಮಿಯಾ ಮಸಾಜಿದ್ “ನ್ಯಾಯಾಲಯವು ಮಸೀದಿಯ ಒಳಗಡೆ ವೀಡಿಯೋ ಚಿತ್ರೀಕರಣ ಮಾಡಲು ಹೇಳಿಲ್ಲ. ಆದಕಾರಣ ಮಸೀದಿಯೊಳಗಡೆ ಯಾರನ್ನು ಬಿಡುವುದಿಲ್ಲ. ಹೊರಗಡೆ ಇರುವ ಬ್ಯಾರಿಕೇಡ್ ವರೆಗೂ ಮಾತ್ರ ಚಿತ್ರೀಕರಿಸಲು ಹೇಳಿದೆ ಎಂದು ವಾದ ಮಾಡಿದೆ. ಮತ್ತು ಕೆಲ ಮುಸ್ಲೀಮರು ವೀಡಿಯೋ ತಂಡದವರು ಒಳ ಹೋಗದಂತೆ ಅವರನ್ನು ಬ್ಯಾರಿಕೇಡ್ ಬಳಿಯೇ ತಡೆಹಿಡಿದಿದ್ದಾರೆ.
ಈ ಕುರಿತು ಹಿಂದೂ ಪರ ವಕೀಲ ಹರಿಶಂಕರ್ ಜೈನ್ “ಮಸೀದಿಯಲ್ಲಿ ದೇವಾಲಯದ ಚಿಹ್ನೆಗಳನ್ನು ತೆಗೆದು ಹಾಕಲಾಗುತ್ತಿದೆ. ಆವರಣದೊಳಗೆ ಸಮೀಕ್ಷೆ ನಡೆಸಿದರೆ, ಇತಿಹಾಸಪೂರ್ವ ದೇವಾಲಯದ ಕಾಂಕ್ರೀಟ್ ಪುರಾವೆಗಳು ಬೆಳಕಿಗೆ ಬರುತ್ತವೆ. ಮಸೀದಿಯ ಹೊರಭಾಗಕ್ಕಷ್ಟೇ ಸಮೀಕ್ಷೆಯನ್ನು ಸೀಮಿತಗೊಳಿಸಿದರೂ ಸ್ಥಳದಲ್ಲಿ ದೇವಾಲಯವಿತ್ತು ಎಂಬುದಕ್ಕೆ ಪುರಾವೆ ದೊರಕಿದೆ. ಮಸೀದಿಯ ಗೋಡೆಗಳ ಮೇಲೆ ಎರಡು ಪುರಾತನ ಸ್ವಸ್ತಿಕಗಳ ಕುರುಹುಗಳು ಗೋಚರಿಸುತ್ತವೆ, ವಿಗ್ರಹಗಳ ಛಿದ್ರಗೊಂಡ ಅವಶೇಷಗಳು ಕಂಡುಬಂದಿವೆ. ಜೊತೆಗೆ ಹಿಂದೂ ದೇವತೆಗಳ ಕೆತ್ತಿದ ಪ್ರತಿಮೆಗಳನ್ನು ಹೊಂದಿರುವ ಕಲ್ಲುಗಳು ಸಹ ಪತ್ತೆಯಾಗಿವೆ” ಎಂದು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಆದರೆ ಮಸೀದಿಯ ಆಡಳಿತ ಮಂಡಳಿಯು ಈ ಆರೋಪವನ್ನು ತಳ್ಳಿಹಾಕಿದ್ದು ಶೃಂಗಾರ ಗೌರಿಯ ಮೂರ್ತಿಯು ಮಸೀದಿಯ ಹೊರವಲಯದ ಪಶ್ಚಿಮ ಗೋಡೆಯಲ್ಲಿದೆ ಎಂದು ಹೇಳಿದೆ.