ಹೊಸದಿಗಂತ ವರದಿ ಶಿರಸಿ :
ಕಾಂಗ್ರೆಸ್ ನಲ್ಲಿ ಐದು ಬಾರಿ ಶಾಸಕನಾಗಿ ಬಿಜೆಪಿಯಲ್ಲಿ ಒಮ್ಮೆ ಶಾಸಕನಾಗಿ ಹಿರಿಯನಾದರೂ ಯಾವ ಪಕ್ಷದಲ್ಲಿಯೂ ಒಮ್ಮೆಯೂ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಎನ್ ವೈ ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ಶಿರಸಿಯ ಸ್ಪೀಕರ್ ಕಚೇರಿಗೆ ಆಗಮಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ 5 ಬಾರಿ ಶಾಸಕನಾಗಿ ಬಿಜೆಪಿಯಿಂದ ಒಮ್ಮೆ ಗೆದ್ದರೂ ಮಂತ್ರಿ ಸ್ಥಾನ ಲಭ್ಯವಾಗಿಲ್ಲ. ನನಗಿಂತ ಚಿಕ್ಕ ವಯಸ್ಸಿನ ಎರಡು ಮೂರು ಸಲ ಗೆದ್ದವರಿಗೆ ಮಂತ್ರಿ ಸ್ಥಾನಮಾನ ಸೇರಿದಂತೆ ಎಲ್ಲ ಗೌರವ ಲಭಿಸಿದೆ. ನನ್ನ ಹಿರಿತನಕ್ಕೆ ಮಂತ್ರಿ ಸ್ಥಾನ ಏಕೆ ಲಭಿಸಿಲ್ಲ ಎಂದು ಮಾಧ್ಯಮದವರೂ ಪ್ರಶ್ನಿಲ್ಲ. ಈಗ ರಾಜೀನಾಮೆ ನೀಡುವಾಗ ಎಲ್ಲರೂ ಕೇಳುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ವಯಸ್ಸಿನ ಕಾರಣಕ್ಕೆ ನಾನು ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ ಎಂದ ಅವರು, ಮಕ್ಕಳು ಭವಿಷ್ಯದ ದೃಷ್ಟಿಯಿಂದ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇನೆ ಎಂದರು. 71 ವರ್ಷವಾಗಿದ್ದು, ಯುವಕರಿಗೆ ಸ್ಥಾನಮಾನ ಬಿಡಬೇಕಿದೆ ಎಂದ ಅವರು, ವಯಸ್ಸಿನ ಕಾರಣಕ್ಕೆ ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷ ಬಿಡುತ್ತಿರುವ ಬಗ್ಗೆ ಸೂಚ್ಯವಾಗಿ ತಿಳಿಸಿದರು.
ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉಪ ಸಭಾಪತಿಗಳಾಗಿ, ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಂಜುಂಡಪ್ಪ ಅನುಷ್ಟಾನ ಸಮಿತಿ ಅಧ್ಯಕ್ಷರಾಗಿ ಕಾರ್ಯ ಮಾಡಿದ್ದರು. ಅದಕ್ಕೆ ಸದಾ ಕೃತಜ್ಞ ಎಂದರು.
ಎನ್ ವೈ ಗೋಪಾಲಕೃಷ್ಣ ರಾಜೀನಾಮೆ ಸಲ್ಲಿಸುವ ವೇಳೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ದೀಪಕ್ ಹೆಗಡೆ ದೊಡ್ಡೂರು ಜತೆಯಲ್ಲಿದ್ದುದು ಕಾಂಗ್ರೆಸ್ ಸೇರ್ಪಡೆ ಪುಷ್ಟೀಕರಿಸಿತು.