ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡ ಸರ್ಕಾರದಿಂದ ಚಾರ್ಧಾಮ್ ತೀರ್ಥ ಯಾತ್ರಿಕರಿಗೆ ಕನ್ನಡದಲ್ಲಿ ಆರೋಗ್ಯ ಸೂಚನೆ ನೀಡಲಾಗಿದೆ.
ಕನ್ನಡ ಸಹಿತ ಇತರ 11 ಭಾಷೆಗಳಲ್ಲಿ ಆರೋಗ್ಯಸೂಚಿ ಬಿಡುಗಡೆ ಮಾಡಿದ್ದು, ಯಾತ್ರೆಗೂ ಮುನ್ನ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಹಿಂದೆ ಬರೀ ಎರಡು ಭಾಷೆಗಳಲ್ಲಿ ಮಾತ್ರ ಸೂಚನೆ ಹೊರಡಿಸುತ್ತಿದ್ದು, ಸಾಕಷ್ಟು ಯಾತ್ರಾರ್ಥಿಗಳಿಗೆ ಇದು ಸಂಪೂರ್ಣವಾಗಿ ಅರ್ಥವಾಗುತ್ತಿರಲಿಲ್ಲ.
ಬರೀ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಸೂಚನೆ ಹೊರಡಿಸುತ್ತಿದ್ದೆವು, ಎಲ್ಲರಿಗೂ ಇದು ಕಷ್ಟ. ಆಯಾ ಊರಿನ ಭಾಷೆಗಳಲ್ಲೇ ಬರೆದರೆ ಅವರು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಈ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರಾಖಂಡ ಆರೋಗ್ಯ ಕಾರ್ಯದರ್ಶಿ ಆರ್. ರಾಜೇಶ್ ಕುಮಾರ್ ಹೇಳಿದ್ದಾರೆ.
2,700 ಮೀ. ಎತ್ತರದ ಹಿಮಾಲಯ ಶ್ರೇಣಿಯ ಮೇಲೆ ಚಾರ್ ಧಾಮ್ ಇದೆ, ಇಲ್ಲಿ ವಿಪರೀತ ಚಳಿ, ಕಡಿಮೆ ತೇವಾಂಶ ಹಾಗೂ ಆಮ್ಲಜನಕ ಇರುತ್ತದೆ. ಹೆಚ್ಚು ಅಲ್ಟ್ರಾವೈಲೆಟ್ ರೇಡಿಯೇಷನ್ಸ್ ಕೂಡ ಇವೆ. ಈ ವಾತಾವರಣಕ್ಕೆ ತೆರಳಲು ಆರೋಗ್ಯ ಸೂಕ್ತವಾಗಿದೆಯೇ ಎಂದು ಮೊದಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಚಾರಣಕ್ಕೆ ಬೇಕಾದ ವಸ್ತುಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳಲಾಗಿದೆ.