ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಚೆಬ್ರೋಲು ರೈಲು ನಿಲ್ದಾಣದ ಸಮೀಪ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಸ್ಥಳದಲ್ಲೇ ನಾಲ್ವರು ದುರ್ಮರಣ
ಮೃತರನ್ನು ಶೇಖ್ ಚಂದ್ ಬಾಷಾ (50), ಅವರ ಪತ್ನಿ ಹಸೀನಾ (45), ಪುತ್ರಿ ಶರ್ಮಿಳಾ (22) ಹಾಗೂ ಸಂಬಂಧಿ ಶೇಖ್ ಶರ್ಮಿಳಾ ಎಂದು ಗುರುತಿಸಲಾಗಿದೆ.
ಚೆರ್ಲಪಲ್ಲಿ–ಶಾಲಿಮಾರ್ ಎಕ್ಸ್ಪ್ರೆಸ್ ರೈಲು ಹಾದುಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶವಗಳು ತೀವ್ರವಾಗಿ ಛಿದ್ರಗೊಂಡಿದ್ದರಿಂದ ಗುರುತು ಪತ್ತೆ ಕಷ್ಟಕರವಾಗಿತ್ತು.
ಇದನ್ನೂ ಓದಿ:
ಎಟಿಎಂ ಕಾರ್ಡ್ನಿಂದ ಗುರುತು ಪತ್ತೆ
ಘಟನಾ ಸ್ಥಳದಲ್ಲಿ ಪತ್ತೆಯಾದ ಎಟಿಎಂ ಕಾರ್ಡ್ ಹಾಗೂ ಪಾರ್ಕಿಂಗ್ ಪಾಸ್ ಆಧರಿಸಿ ಮೃತರ ಗುರುತು ದೃಢಪಡಿಸಲಾಗಿದೆ. ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.
ಅಪಘಾತದ ಕಾರಣದ ತನಿಖೆ
ಘಟನೆಯ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ಆಕಸ್ಮಿಕ ಅಪಘಾತವೇ ಅಥವಾ ಬೇರೆ ಯಾವುದೇ ಕಾರಣ ಇದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕವೇ ದುರಂತದ ನಿಖರ ಕಾರಣ ತಿಳಿಯಲಿದೆ.



