ಕೊಡಗಿನ ವಿವಿಧೆಡೆ ಭಾರೀ ಮಳೆ: ದಿಢೀರ್ ಪ್ರವಾಹ, ಮನೆಗಳಿಗೆ ನುಗ್ಗಿದ ನೀರು

ಹೊಸದಿಗಂತ ವರದಿ ಮಡಿಕೇರಿ:

ಜಿಲ್ಲೆಯ ಹಲವೆಡೆ ಸೋಮವಾರ ಬೆಳಗಿನ ಜಾವ ಭಾರೀ ಮಳೆಯಾಗಿದ್ದು, ಕೊಯನಾಡುವಿನಲ್ಲಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರೆ, ಅತ್ತ ಭಾಗಮಂಡಲದಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಸೋಮವಾರ ಬೆಳಗಿನ ಜಾವ ಕೊಡಗಿನ ಗಡಿ ಭಾಗವಾದ ಸಂಪಾಜೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಪರಿಣಾಮವಾಗಿ ಪಯಸ್ವಿನಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಕೊಯನಾಡುವಿನ ಕಿಂಡಿ ಅಣೆಕಟ್ಟೆ ಸುತ್ತಮುತ್ತಲ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು,ಕಿಂಡಿ ಅಣೆಕಟ್ಟೆಯ ಸಂಪರ್ಕ ಸೇತುವೆ ಕುಸಿದಿದೆ. ಪರಿಣಾಮವಾಗಿ ಪ್ರವಾಹದಲ್ಲಿ ಸಿಲುಕಿದ್ದ ವಿಶೇಷಚೇತನ ಚೇತನ್ ಎಂಬವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಅಲ್ಲಿನ ನಿವಾಸಿಗಳ ಹಂದಿ, ಕೋಳಿ ಸೇರಿದಂತೆ ಸಾಕು ಪ್ರಾಣಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ನಾಲ್ಕನೇ ಬಾರಿಗೆ ಕೊಯನಾಡುವಿನಲ್ಲಿ ಪ್ರವಾಹ ಉಂಟಾಗಿದ್ದು, ಕೊಯನಾಡು ಕಿಂಡಿ ಅಣೆಕಟ್ಟೆ ಹಾಗೂ ಸೇತುವೆ ಬಳಿ ನೂರಾರು ಮರ ಹಾಗೂ ರೆಂಬೆ ಕೊಂಬೆಗಳು ಸಿಲುಕಿಕೊಳ್ಳುತ್ತಿರುವುದೇ ಮನೆಗಳಿಗೆ ನೀರು ನುಗ್ಗಲು ಕಾರಣ ಎನ್ನಲಾಗಿದೆ.

ವಿಷಯ ತಿಳಿದ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಅವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಂಡಿದ್ದಾರೆ. ಅತ್ತ ತಲಕಾವೇರಿ ಸುತ್ತಮುತ್ತವೂ ಭಾರೀ ಮಳೆಯಾಗಿದ್ದು, ಪರಿಣಾಮವಾಗಿ ಕಾವೇರಿ ಹಾಗೂ ಕನ್ನಿಕೆ ನದಿಗಳು ತುಂಬಿ ಹರಿಯುತ್ತಿವೆ. ಭಾಗಮಂಡಲ-ನಾಪೋಕ್ಲು ರಸ್ತೆ ಹಾಗೂ ಭಾಗಮಂಡಲ- ಮಡಿಕೇರಿ ರಸ್ತೆ ಜಲಾವೃತಗೊಂಡಿದ್ದು, ಕಾವೇರಿಯಲ್ಲಿ ನದಿಯಲ್ಲಿ ದಿಢೀರ್ ಪ್ರವಾಹ ಕಂಡು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!