ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಸುಮಾರು 1,250 ಎಕರೆ ಪ್ರದೇಶದ ಬಾಳೆ ತೋಟ ನಾಶವಾಗಿದೆ.
900ಕ್ಕೂ ಹೆಚ್ಚು ರೈತರು 25 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ಮುಂದಿನ ವಾರದಲ್ಲಿ ಬೆಳೆ ತೆಗೆಯಲು ನಿರ್ಧರಿಸಿದ್ದರು. ಇದೀಗ ತೋಟಗಳು ಸಂಪೂರ್ಣ ಹಾಳಾಗಿರುವುದರಿಂದ ಕಂಗೆಟ್ಟಿದ್ದಾರೆ. ಪಪ್ಪಾಯಿ ಬೆಳೆಗಾರರು ಕೂಡ ಮಳೆಯ ಆರ್ಭಟಕ್ಕೆ ನಷ್ಟ ಅನುಭವಿಸಿದ್ದಾರೆ.
ಜಿಲ್ಲೆಯಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲೂಕುಗಳಲ್ಲಿ ಸುಮಾರು 700 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ ಹೆಚ್ಚು ಹಾನಿಯಾಗಿದೆ.